ಬೆಂಗಳೂರು: ಕುಲಾಂತರಿ ಬಿಟಿ ಬದನೆ - ಕಂಪೆನಿಗಳ ಹಿಂದೆ ನಮ್ಮ ರೈತರು ಹೋಗುವಂತಾಗಬಾರದು: ಅನಂತಮೂರ್ತಿ |
ಪ್ರಕಟಿಸಿದ ದಿನಾಂಕ : 2010-02-07
ಬೆಂಗಳೂರು, ಫೆ. ೬: ಯಾವುದೇ ಕಾರಣಕ್ಕೂ ನಮ್ಮ ರೈತರು ಬೀಜಗಳಿಗಾಗಿ ವಿದೇಶಿ ಕಂಪೆನಿಗಳ ಹಿಂದೆ ಹೋಗುವಂತೆ ಸರಕಾರಗಳು ಮಾಡಬಾರದು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ತಾಕೀತು ಮಾಡಿದರು.
ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ನೆಲ ಮೂಲದ ಸೊಗಡನ್ನು ನಾಶಗೊಳಿಸುವ ಕುಲಾಂತರಿ ಬಿಟಿ ಬದನೆ ಬೇಡವೇ ಬೇಡ. ಈ ಹಿನ್ನೆಲೆಯಲ್ಲಿ ಬಿಟಿ ಬದನೆಗೆ ವಿರೋಧಿಸುವವರೊಂದಿಗೆ ನಿಲ್ಲುತ್ತೇನೆ ಎಂದು ಸ್ಪಷ್ಟಣೆ ನೀಡಿದರು.

ದೊಡ್ಡ-ದೊಡ್ಡ ಕಂಪೆನಿಗಳು ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬಂದು ಸಮಾಲೋಚನಾ ಸಭೆಯಲ್ಲಿ ಗಲಾಟೆ ಮಾಡಿಸುತ್ತಿದ್ದಾರೆ. ಇದೆಲ್ಲ ಬಹಳ ದಿನ ನಡೆಯುವುದಿಲ್ಲ. ಸ್ವಾವಲಂಬಿ ರೈತರು ಕಂಪೆನಿಗಳ ಹಿಂದೆ ಸುತ್ತುವಂತೆ ಆಗಬಾರದು. ಈ ಬಗ್ಗೆ ಜನಪ್ರತಿನಿಧಿಗಳು ಗಂಭೀರವಾಗಿ ಚಿಂತಿಸಬೇಕು ಎಂದು ಅನಂತ ಮೂರ್ತಿ ಮನವಿ ಮಾಡಿದರು.
ಬೆಲ್ಲಕ್ಕೆ ವಿಷ ಬೆರೆಸಿ ರೈತರ ಮೇಲೆ ಪ್ರಯೋಗ ಬೇಡ: ಬೆಲ್ಲಕ್ಕೆ ವಿಷ ಬೆರೆಸಿ ಇಲಿ ಹಿಡಿಯ ರೀತಿಯಲ್ಲಿ ರೈತರ ಮೇಲೆ ಕುಲಾಂತರಿ ಬಿಟಿ ಬದನೆ ಪ್ರಯೋಗ ನಡೆಯಬಾರದು. ರೈತರು ಪ್ರಯೋಗದ ಬಲಿಪಶುಗಳಾಗವುದು ಬೇಡ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಿರೋಧ ವ್ಯಕ್ತಪಡಿಸಿದರು.

ಬಹುರಾಷ್ಟ್ರೀಯ ಕಂಪೆನಿಗಳ ಒತ್ತಡಕ್ಕೆ ಮಣಿದು ರೈತರು ಮತ್ತು ಜನಸಾಮಾನ್ಯರ ಬದುಕಿನ ಮೇಲೆ ದುಷ್ಪರಿಣಾಮ ಉಂಟುಮಾಡುವ ಬಿಟಿ ಬದನೆಗೆ ಕೇಂದ್ರ ಸರಕಾರ ಅವಕಾಶ ನೀಡಬಾರದು. ಈ ಬಗ್ಗೆ ಪ್ರಧಾನ ಮಂತ್ರಿ ಹಾಗೂ ಪರಿಸರ ಖಾತೆ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ ಗೌಡರು, ಪತ್ರದ ಪ್ರತಿಯನ್ನು ಜೈರಾಂ ರಮೇಶ್ ಇದೇ ಸಂದರ್ಭದಲ್ಲಿ ಅರ್ಪಿಸಿದರು. ಈ ಬಗ್ಗೆ ಸಂಸತ್ನಲ್ಲಿಯೂ ಚರ್ಚಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ವಿಜ್ಞಾನಿಗಳ ಮೊದಲು ತಿನ್ನಲಿ: ಕುಲಾಂತರಿ ಬಿಟಿ ಬದನೆಯಿಂದ ಆರೋಗ್ಯದ ಮೇಲೆ ಯಾವುದೇ ಹಾನಿಯಾಗುವುದಿಲ್ಲ ಎಂದು ಬಹುರಾಷ್ಟ್ರೀಯ ಕಂಪೆನಿಗಳ ದಲ್ಲಾಳಿಗಳಾಗಿರುವ ವಿಜ್ಞಾನಿಗಳು ಹೇಳುತ್ತಿದ್ದಾರೆ. ಮೊದಲಿಗೆ ವಿಜ್ಞಾನಿಗಳು ಮತ್ತವರ ಕುಟುಂಬದ ಸದಸ್ಯರು ೧೫ ವರ್ಷಗಳ ಕಾಲ ಬಿಟಿ ಬದನೆ ತಿನ್ನಲಿ. ಅನಂತರ ಅದನ್ನು ರಾಷ್ಟ್ರಕ್ಕೆ ಪರಿಚಯಿಸಲಿ ಎಂದು ಪ್ರಗತಿಪರ ಕೃಷಿಕ ನಾರಾಯಣ ರೆಡ್ಡಿ ಖಾರವಾಗಿ ಸಲಹೆ ಮಾಡಿದರು.
ರಾಜ್ಯದಲ್ಲಿ ಬಿಟಿ ಬದನೆ ತಳಿ ಬೇಕೆಂದು ರೈತರ್ಯಾರು ಅರ್ಜಿ ಹಾಕಿಲ್ಲ. ಸ್ವತಂತ್ರ ಭಾರತದಲ್ಲಿ ರೈತರು ಏನು ಬೆಳೆಯಬೇಕೆಂದು ನಿರ್ಧರಿಸುವ ಅಧಿಕಾರವನ್ನು ಸರಕಾರ ಮಾನ್ಸಂಟೋ ಕಂಪೆನಿಗೆ ನೀಡಲು ಹುನ್ನಾರ ನಡೆಸಿದೆ. ಇದನ್ನು ಯಾವುದೇ ಕಾರಣಕ್ಕೂ ರಾಜ್ಯದ ರೈತರು ಸಹಿಸುವುದಿಲ್ಲ ಎಂದು ರೈತ ಮುಖಂಡರಾದ ಸುನಂದ ಜಯರಾಂ ಎಚ್ಚರಿಸಿದರು.
ಜೀವ ಸಂಕುಲದ ಮೇಲೆ ದುಷ್ಪರಿಣಾಮ ಬಿರುವ ಕುಲಾಂತರಿ ಬಿಟಿ ಬೇಡ: ಜೀವ ಸಂಕುಲ ಮತ್ತು ಪ್ರಾಣಿ ಸಂಕುಲದ ಮೇಲೆ ದುಷ್ಪರಿಣಾಮ ಬಿರುವ ಕುಲಾಂತರಿ ಬಿಟಿ ಬದನೆ ತಳಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಒತ್ತಾಯಿಸಿದರು.
ಸಮಾಲೋಚನಾ ಸಭೆಯಲ್ಲಿ ಶೇ.೮೦ರಷ್ಟು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಮ್ಮ ರೈತರು ಹೇರಳವಾಗಿ ರಾಸಾಯನಿಕ ಬಳಕೆ ಮಾಡಿ ಭೂಮಿಯನ್ನು ವಿಷವಾಗಿದ್ದಾರೆ. ಕುಲಾಂತರಿ ತಳಿಗಳನ್ನು ಪರಿಚಯಿಸುವ ಮೂಲಕ ರೈತರ ಬೀಜ ಸ್ವಾತಂತ್ರವನ್ನು ಕಸಿದುಕೊಳ್ಳುವ ಕಸಿದುಕೊಳ್ಳಲು ಕೇಂದ್ರ ಸರಕಾರ ಹುನ್ನಾರ ನಡೆಸಿದೆ ಎಂದು ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಮಾನ್ಸಂಟೋ ಕಂಪೆನಿ ಏಜೆಂಟ್: ನಂತರ ಮಾತನಾಡಿದ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ.ಆನಂದ್, ಕೇಂದ್ರ ಸರಕಾರ ಕುಲಾಂತರಿ ಬಿಟಿ ಬದನೆ ಬಗ್ಗೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಅಮೇರಿಕಾದ ಮಾನ್ಸಂಟೋ ಕಂಪೆನಿಯ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ನೇರವಾಗಿ ಆರೋಪಿಸಿದರು. ಇದರಿಂದ ತೀವ್ರ ಆಕ್ರೋಶಗೊಂಡ ಕೇಂದ್ರ ಸಚಿವ ಜೈರಾಂ ರಮೇಶ್, ತಾನು ಯಾವುದೇ ಕಂಪೆನಿಯ ಏಜೆಂಟ್ ಅಲ್ಲ. ಬೆಳಗ್ಗೆಯಿಂದ ಕುಳಿತ ಎಲ್ಲರ ಅಭಿಪ್ರಾಯವನ್ನು ಆಲಿಸಿದ್ದೇನೆ. ನೀವು ಈ ರೀತಿ ಮಾತನಾಡುವುದು ಒಳ್ಳೆಯದಲ್ಲ. ನೀವು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಭೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು.
ಬಿಟಿ ಬದನೆ : ‘ಏಕಪಕ್ಷೀಯ ನಿರ್ಧಾರ ಇಲ್ಲ’

ಬಿ.ಟಿ. ಬದನೆ ಕುರಿತು ಪರ- ವಿರೋಧವಾದ ಅಭಿಪ್ರಾಯಗಳು ವ್ಯಕ್ತವಾಗಿವೆ. ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಇದೇ ತಿಂಗಳ 10ರಂದು ಮಧ್ಯಾಹ್ನ 12.30ಕ್ಕೆ ತೀರ್ಮಾನವನ್ನು ಪ್ರಕಟಿಸಲಾಗುವುದು.ಎಂದುಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ತಿಳಿಸಿದರು.
ಬೆಂಗಳೂರು: ಬಿ.ಟಿ ಬದನೆ ಕುರಿತು ಸಾರ್ವಜನಿಕರಿಂದ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಗೌರವಿಸುವ ಮೂಲಕ ನಿಷ್ಪಕ್ಷಪಾತ ತೀರ್ಮಾನ ತೆಗೆದುಕೊಳ್ಳಲಾಗುವುದು. ಇದೇ ವೇಳೆ ವೈಜ್ಞಾನಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಭರವಸೆ ನೀಡಿದರು.
ಬೃಹತ್ ರ್ಯಾಲಿ ಬಿ.ಟಿ. ಬದನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಹಲವು ರೈತಪರ ಸಂಘಟನೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಶನಿವಾರ ಬೆಂಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು.
ನಗರದ ರೈಲು ನಿಲ್ದಾಣದಿಂದ ಸೆಂಟ್ರಲ್ ಕಾಲೇಜಿನವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ರೈತಪರ ಸಂಘಟನೆಗಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಜೈರಾಂ ರಮೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿ.ಟಿ. ಬದನೆ ಕುರಿತು ಸಚಿವ ಜೈರಾಮ್ ಅವರು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಮಾಲೋಚನೆ ನಡೆಸುತ್ತಿದ್ದ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು, ಸಭೆಯನ್ನು ವಿರೋಧಿಸಿ ಒಳನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆಯಲು ಯತ್ನಿಸಿದ್ದರಿಂದ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸಭೆ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ಹೊರಗೆ ಎಳೆದೊಯ್ದು ಪರಿಸ್ಥಿತಿ ಶಾಂತಗೊಳಿಸಿದರು. ಆದರೂ ಸಭೆ ಮುಗಿಯುವವರೆಗೂ ಪ್ರತಿಭಟನಾಕಾರರು ಕಾಲೇಜಿನ ಆವರಣದಲ್ಲೇ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣವಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೆಂಟ್ರಲ್ ಕಾಲೇಜು ಸುತ್ತಮುತ್ತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ನಗರದಲ್ಲಿ ಶನಿವಾರ ನಡೆದ ಬಿ.ಟಿ ಬದನೆ ಕುರಿತ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ರೈತರು, ರೈತ ಸಂಘಟನೆಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಅಭಿಪ್ರಾಯಗಳನ್ನು ಆಲಿಸಿದ ನಂತರ ಈ ವಿಷಯ ತಿಳಿಸಿದ ಅವರು, ಈಗಾಗಲೇ ದೇಶದ ಏಳು ಕಡೆ ಸುಮಾರು ಎಂಟು ಸಾವಿರ ಜನರ ಅಹವಾಲುಗಳನ್ನು ಆಲಿಸಿದ್ದೇವೆ. ಅವರ ಅಭಿಪ್ರಾಯಗಳನ್ನು ನಿರ್ಲಕ್ಷಿಸುವುದಿಲ್ಲ ಎಂದರು.
ಬಿ.ಟಿ. ಬದನೆ ಕುರಿತು ಪರ- ವಿರೋಧವಾದ ಅಭಿಪ್ರಾಯಗಳು ವ್ಯಕ್ತವಾಗಿವೆ. ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಇದೇ ತಿಂಗಳ 10ರಂದು ಮಧ್ಯಾಹ್ನ 12.30ಕ್ಕೆ ತೀರ್ಮಾನವನ್ನು ಪ್ರಕಟಿಸಲಾಗುವುದು. ಸರ್ಕಾರದ ನಿರ್ಧಾರದಿಂದ ಕೆಲವರಿಗೆ ಸಂತೋಷವಾಗಬಹುದು, ಕೆಲವರಿಗೆ ಬೇಸರವಾಗಬಹುದು. ಆದರೆ ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ನುಡಿದರು.
‘ಸರ್ಕಾರ ಯಾವುದೇ ಕಾರಣಕ್ಕೂ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುವುದಿಲ್ಲ, ಆ ರೀತಿ ಮಾಡುವುದಾಗಿದ್ದರೆ ಅಕ್ಟೋಬರ್ನಲ್ಲಿ ತಜ್ಞರ ಸಮಿತಿ ವರದಿ ನೀಡಿದ ತಕ್ಷಣ ನಮ್ಮ ನಿರ್ಧಾರವನ್ನು ತಿಳಿಸುತ್ತಿದ್ದೆವು. ಇಲ್ಲವೆ ಜಂಟಿ ಸದನ ಸಮಿತಿ ರಚಿಸಿ ಅದಕ್ಕೆ ಜವಾಬ್ದಾರಿಯನ್ನು ವರ್ಗಾಯಿಸುತ್ತಿದ್ದೆವು. ಆ ರೀತಿ ಮಾಡುವುದು ಬೇಡ. ನೇರವಾಗಿ ರೈತರ ಅಭಿಪ್ರಾಯವನ್ನು ಪಡೆಯಬೇಕು ಎಂಬ ದೃಷ್ಟಿಯಿಂದ ಅಹವಾಲುಗಳನ್ನು ಆಲಿಸುತ್ತಿದ್ದೇವೆ ಎಂದು ತಿಳಿಸಿದರು.
ಭವಿಷ್ಯದಲ್ಲಿ ಆಹಾರದ ಬಿಕ್ಕಟ್ಟು ಉಂಟಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ದೇಶದ ವಿವಿಧೆಡೆಯ 50 ಮಂದಿ ವಿಜ್ಞಾನಿಗಳು ಈ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಯಾವುದೇ ಜಾತಿ, ಧರ್ಮ, ಪ್ರಾದೇಶಿಕತೆಯನ್ನು ನೋಡದೆ ಪ್ರಜಾಸತ್ತಾತ್ಮವಾಗಿ ರೈತರು, ಸರ್ಕಾರೇತರ ಸಂಘ ಸಂಸ್ಥೆಗಳು, ವಿಜ್ಞಾನಿಗಳ ಅಭಿಪ್ರಾಯಗಳನ್ನು ಆಲಿಸಿದ್ದೇವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನಕ್ಕೆ ಬರಲಾಗುವುದು’ ಎಂದು ತಿಳಿಸಿದರು.
ಕೋಲ್ಕತ್ತದಲ್ಲಿ ಶೇ 30ರಷ್ಟು ಹಾಗೂ ಭುವನೇಶ್ವರದಲ್ಲಿ ಶೇ 20ರಷ್ಟು ಬದನೆ ಬೆಳೆಯಲಾಗುತ್ತಿದೆ. ಗುಜರಾತ್ನಲ್ಲಿ ಈಗಾಗಲೇ ಬಿ.ಟಿ ಹತ್ತಿ ಯಶಸ್ವಿಯಾಗಿದೆ. ಆಂಧ್ರಪ್ರದೇಶದಲ್ಲೂ ಹತ್ತಿಯನ್ನು ಜಾಸ್ತಿ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ಶೇ 4ರಷ್ಟು ಮಾತ್ರ ಬದನೆ ಬೆಳೆಯಲಾಗುತ್ತಿದ್ದರೂ, ಬೆಂಗಳೂರಿನಲ್ಲಿ ವಿಜ್ಞಾನಿಗಳು, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ತಜ್ಞರು ಹೆಚ್ಚಾಗಿ ಇದ್ದಾರೆ ಎಂಬ ಕಾರಣಕ್ಕೆ ಸಮಾಲೋಚನಾ ಸಭೆ ಕರೆಯಲಾಗಿದೆ.
ವೈಜ್ಞಾನಿಕವಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಏಳು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಬಿ.ಟಿ. ಬದನೆ ಸಂಬಂಧ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೂ ಪತ್ರ ಬರೆಯಲಾಗಿತ್ತು. ಬಹುತೇಕ ರಾಜ್ಯಗಳು ಈಗಾಗಲೇ ತಮ್ಮ ನಿಲುವನ್ನು ವ್ಯಕ್ತಪಡಿಸಿವೆ.ಉತ್ಪಾದಕರು ಮತ್ತು ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಪ್ರಧಾನಮಂತ್ರಿ ಡಾ.ಮನಮೋಹನಸಿಂಗ್ ಈ ವಿಷಯದ ಬಗ್ಗೆ ನೇರವಾಗಿ ತಮ್ಮ ಅಭಿಪ್ರಾಯ ತಿಳಿಸಿಲ್ಲ. ಆದರೆ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಆಹಾರದ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದರು. ‘ವಿಜ್ಞಾನ, ಸಾಮಾಜಿಕ ಸ್ಥಿತಿಗತಿ, ಆಹಾರದ ಬಿಕ್ಕಟ್ಟು ಮೊದಲಾದ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಅಭಿಪ್ರಾಯ ಕೂಡ ಕೆಲವೊಮ್ಮೆ ಮ್ಯಾಚ್ ಫಿಕ್ಸಿಂಗ್ ಆಗುತ್ತದೆ. ಸರ್ಕಾರೇತರ ಸಂಘ ಸಂಸ್ಥೆಗಳು ಕೂಡ ಜನರನ್ನು ಒಂದೇ ದೃಷ್ಟಿಕೋನದತ್ತ ತೆಗೆದುಕೊಂಡು ಹೋಗುತ್ತಿರುವುದು ನನಗೆ ಗೊತ್ತಿದೆ. ನಾನು ಮೂರ್ಖನ ರೀತಿ ಕಾಣಬಹುದು, ಆದರೆ ಮೂರ್ಖನಲ್ಲ’ ಎಂದು ಮಾರ್ಮಿಕವಾಗಿ ನುಡಿದರು,
ಸವಾಲು: ಬಿ.ಟಿ ಬದನೆ ಸೇರಿದಂತೆ 190 ತಳಿಗಳನ್ನು ರಾಷ್ಟ್ರೀಯ ಜೀವವೈವಿಧ್ಯ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ ಎಂದು ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್.ಆನಂದ್ ಮಾಡಿದ ಆರೋಪವನ್ನು ತಳ್ಳಿ ಹಾಕಿದ ಅವರು, ಬಿ.ಟಿ. ಬದನೆ ಸೇರಿದಂತೆ ರೈತರು ಬೆಳೆಯುವ ಹಣ್ಣು- ತರಕಾರಿಗಳ ರಫ್ತಿಗೆ ಜೀವ ವೈವಿಧ್ಯ ಮಂಡಳಿಯ ಒಪ್ಪಿಗೆಬೇಕು ಎಂಬ ನಿರ್ಬಂಧವನ್ನು ತೆಗೆದು ಹಾಕಲು ಅಧಿಸೂಚನೆ ಹೊರಡಿಸಲಾಗಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರು ಮತ್ತು ಆನಂದ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಒಂದು ವೇಳೆ ಆ ರೀತಿಯ ಅಧಿಸೂಚನೆ ಹೊರಡಿಸಿರುವುದಾದರೆ ಬಹಿರಂಗವಾಗಿ ಕ್ಷಮೆ ಯಾಚಿಸುತ್ತೇನೆ, ಇಲ್ಲದಿದ್ದರೆ ನೀವು (ಆನಂದ್) ರಾಜೀನಾಮೆ ಕೊಡಬೇಕು ಎಂದು ಜೈರಾಮ್ ರಮೇಶ್ ಸವಾಲು ಹಾಕಿದರು. ಕೊನೆಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಆ ರೀತಿ ಅಧಿಸೂಚನೆ ಹೊರಡಿಸಿಲ್ಲ, ಆ ರೀತಿ ಏನಾದರೂ ಆಗಿದ್ದರೆ ವಾಪಸ್ ಪಡೆಯಲು ಸಿದ್ಧ ಎಂದು ಘೋಷಿಸಿದರು. ಇದೇ ವಿಷಯದ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವಿಷಯ ಪ್ರಸ್ತಾಪಿಸಿದಾಗ, ಸಚಿವರು ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ| ಪ್ರಜಾವಾಣಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-07
|
|
|