ಕೊಲ್ಲೂರು, ಮಾ.೯: ಇಂದು ಸಂಜೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ರಥೋತ್ಸವ ಸಂದರ್ಭದಲ್ಲಿ ಜನರ ನೂಕುನುಗ್ಗಲಿನಲ್ಲಿ ಭಕ್ತನೋರ್ವ ರಥದಡಿ ಬಿದ್ದು ಸ್ಥಳದಲ್ಲೇ ಮೃತ ಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದಾನೆ.
ಸಂಜೆ ೫:೪೫ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಯನ್ನು ಕೇರಳ ಕಲ್ಲಿಕೋಟೆಯ ಮಡವಳ್ಳಿಯ ಎಂ.ವಿ.ಬಾಬು (೪೫) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಕೇರಳ ಕಣ್ಣೂರಿನ ಮಲೆಚಲುವಿನ ಹರಿದಾಸ (೫೦) ಅವರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಲ್ಲೂರು ಮುಕಾಂಬಿಕಾ ದೇವಿಯ ರಥೋತ್ಸವ ಇಂದು ಸಂಜೆ ಆರಂಭಗೊಳ್ಳುತ್ತಿದ್ದಂತೆ ರಥದ ಮೇಲಿನಿಂದ ನಾಣ್ಯಗಳನ್ನು ಎಸೆಯಲಾಯಿತು. ಇದನ್ನು ಹೆಕ್ಕಲು ಜನರು ಮುಗಿಬಿದ್ದಾಗ ಉಂಟಾದ ನೂಕುನುಗ್ಗಲಿನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಇದರಿಂದ ಸುಮಾರು ಅರ್ಧಗಂಟೆ ರಥವನ್ನು ಅಲ್ಲಿಯೇ ನಿಲ್ಲಿಸಲಾಯಿತು. ಬಳಿಕ ಪೊಲೀಸರ ಭದ್ರತೆಯೊಂದಿಗೆ ರಥೋತ್ಸವ ನಡೆಯಿತು.