ವಿಶ್ವದಲ್ಲೆ ಅಪರೂಪ ಎನಿಸುವ ವನ್ಯ ಜೀವಿಗಳ ತಾಣ ಅ೦ಬಾರಗುಡ್ಡ |
ಪ್ರಕಟಿಸಿದ ದಿನಾಂಕ : 2010-03-11
ವಿಶ್ವದಲ್ಲಿ ಗುರುತಾದ ಪ್ರಮುಖ ಅರಣ್ಯ ಪ್ರದೇಶದಲ್ಲಿ ಪಶ್ಚಿಮಘಟ್ಟವೂ ಒಂದು. ಆ ಶ್ರೇಣಿಯ ಹೃದಯ ಭಾಗದಲ್ಲಿ ಅಂಬಾರಗುಡ್ಡ ಗಿರಿಯಿದೆ. ಭುವನಗಿರಿ ಕೊಡಚಾದ್ರಿಗೆ ತಾಗಿಕೊಂಡಂತಿದೆ ಅಂಬಾರಗುಡ್ಡ. ಮೂಕಾಂಬಿಕಾ ಅಭಯಾರಣ್ಯದಿಂದ ಶರಾವತಿ ಅಭಯಾರಣ್ಯಕ್ಕೆ ಸಾಗುವ ವನ್ಯಜೀವಿಗಳ ಕಾರಿಡಾರ್ ಇದು.
-ಜೀವ ವೈವಿಧ್ಯತೆ: ಸಹಸ್ರಾರು ಕುಟುಂಬಗಳ ಬದುಕಿನ ಜೀವಸೆಲೆಯಾದ ಅಂಬಾರಗುಡ್ಡ ಪ್ರದೇಶ ವಿಶ್ವದಲ್ಲೇ ಅಪರೂಪ ಎನಿಸುವ ವನ್ಯಜೀವಿಗಳ ತಾಣ ಎಂಬ ಸತ್ಯ ವಿಜ್ಞಾನಿಗಳ ಸಂಶೋಧನೆ ಹೊರಹಾಕಿದೆ. ಪ್ರಪಂಚದ ಎಲ್ಲೂ ಕಾಣ ಸಿಗದ ಸಿಸ್ಟುರಾ ನಾಗೋಡಿಯನ್ಸಿಸ್ ಮತ್ತು ಸಿಸ್ಟುರಾ ಶರಾವತಿಯನ್ಸಿಸ್ ಎಂಬ ವಿಶಿಷ್ಟ ಮೀನುಗಳು ಗುಡ್ಡ ತಪ್ಪಲಿನಲ್ಲಿ ಹರಿಯುವ ನಾಗೋಡಿಹೊಳೆ ಮತ್ತು ಶರಾವತಿ ಹಿನ್ನೀರಿನಲ್ಲಿದೆ.
ಜಗತ್ತಿನಲ್ಲೇ ಅಪರೂಪದ ೪೨ ವಿವಿಧ ಜಾತಿಯ ಕಪ್ಪೆಗಳು, ಹೆಬ್ಬಾವು, ಕಾಳಿಂಗಸರ್ಪ, ಸೇರಿ ದಂತೆ ೬೦೦ಕ್ಕೂ ಹೆಚ್ಚು ಹಾವಿನ ಪ್ರಭೇದಗಳು ಇಲ್ಲಿವೆ. ಅತ್ಯಂತ ಅಪರೂಪದ ಬೆಕ್ಕುಗಳು, ೧೭೫ ಕ್ಕೂ ಹೆಚ್ಚು ವಿವಿಧ ವಿನ್ಯಾಸದ ಆಕರ್ಷಕ ಚಿಟ್ಟೆಗಳ ಸಂತತಿ ಈ ಪ್ರದೇಶದಲ್ಲಿದೆ.
ಸಸ್ಯ ಪ್ರಭೇದ: ಎಕ್ಕೆ, ಕಾಡುಬೆಂಡೆ, ಅಮೃತಬಳ್ಳಿ, ರಂಜಲು, ಕಾರೆ, ಒಂದಲಗ, ತೊರಂಗಲು, ಅತ್ತಿ, ವಾಟೆ, ನೆಲನೆಲ್ಲಿ, ಮುಳ್ಳಣ್ಣು, ಆಡುಸೋಗೆ ಸೇರಿ ಸುಮಾರು ೨೦೯ ಜಾತಿಯ ಔಷಧೀಯ ಸಸ್ಯಗಳು, ೧೩೪ ವಿವಿಧ ಜಾತಿಯ ಮರಗಳು, ೫೭ ಜಾತಿಯ ವಿಶಿಷ್ಟ ಪೊದೆಗಳು, ೧೮ ಜಾತಿಯ ಮರಬಳ್ಳಿಗಳು ಈ ಗಿರಿಪ್ರದೇಶದಲ್ಲಿ ಅಡಕವಾಗಿವೆ.
ಶೇ.೪೭ರಷ್ಟು ಹರಿದ್ವರ್ಣ ಕಾಡು, ೩೦೪೦ರಷ್ಟು ಗಿಡಮೂಲಿಕೆ ಸಸ್ಯಗಳ ಸಂಗಮವಾಗಿರುವ ಇಲ್ಲಿ ಶೇ.೫೫೬೦ ರಷ್ಟು ಆರ್ಥಿಕ ಮಹತ್ವ ಹೊಂದಿದ ಹಳ್ಳ, ಹೊಳೆ, ತೊರೆ, ಜರಿಗಳ ಉಗಮ ಇಲ್ಲಿಂದ ಲೇ. ಅವಕ್ಕೆಲ್ಲಾ ಅಂಬಾರಗುಡ್ಡವೇ ಮೂಲ ಜಲಸೆಲೆ.
ಈ ಭಾಗದಲ್ಲಿ ಮಳೆಗಾಲದ ದಿನಂಪ್ರತಿ ೨೫೩೦ಸೆಂ.ಮೀ ಮಳೆ ಬೀಳುವ ಪ್ರದೇಶವಾಗಿದ್ದು ಇಲ್ಲಿ ಯ ನಾಗೋಡಿಹೊಳೆ, ಎಣ್ಣೆಹೊಳೆ, ಚಂದವಳ್ಳಿಹೊಳೆ ಸಮೃದ್ಧವಾಗಿ ಹರಿದರೆ ಮಾತ್ರ ನಾಡಿಗೆ ವಿದ್ಯುತ್ ಸರಬರಾಜು ಮಾಡುವ ಲಿಂಗನಮಕ್ಕಿ ಡ್ಯಾಂಗೆ ನೀರು. ಮಾತ್ರವಲ್ಲ ಗಿರಿಯ ತಪ್ಪಲಿನಲಿ ಬದುಕು ಕಟ್ಟಿಕೊಂಡ ಮರಾಠಿ, ಮುರಳ್ಳಿ, ಯರನಬೀಳು, ಕಸಗೋಡು, ಆವಿಗೆ, ಹೊಸೂರು, ಸುಳ್ಳ ಳ್ಳಿ, ಇಕ್ಕಿಬೀಳು, ನಾಗೋಡಿ ಸೇರಿದಂತೆ ಹತ್ತಾರು ಗ್ರಾಮದ ನೂರಾರು ಕುಟುಂಬಗಳ ಪಾಲಿಗೆ ಜೀವಸೆಲೆ ಕೂಡ ಅಂಬಾರಗುಡ್ಡವೇ.
ಗಣಿಗಾರಿಕೆ: ಅತ್ಯಮೂಲ್ಯ ವನ್ಯಜೀವಿ ಸಂಪತ್ತಿನ ಆಗರವಾದ ಅಂಬಾರಗುಡ್ಡ ಪ್ರದೇಶ ಸಮೃದ್ಧ ಅದಿರಿನ ನಿಕ್ಷೇಪವೂ ಹೌದು. ಹಾಗಾಗಿ ಗಣಿಮಾಲೀಕರ ಕಣ್ಣು ಗಿರಿಯತ್ತ ನೆಟ್ಟಿದೆ. ೨೦೦೪ರಲ್ಲಿ ಗಣಿಗಾರಿಕೆ ಪ್ರಾರಂಭವಾಗಿತ್ತು. ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ನೇತ್ರತ್ವದಲ್ಲಿ ಪರಿಸರವಾದಿಗಳು, ಗ್ರಾಮಸ್ಥರು ತೀವ್ರ ವಿರೋಧ ಒಡ್ಡಿದ ಪರಿಣಾಮ ಗಣಿಗಾರಿಕೆ ಸ್ಥಗಿತಗೊಂ ಡಿದೆ. ಜೊತೆಗೆ ಗಿರಿಯ ಸಂರಕ್ಷಣೆಗಾಗಿ ಕೊಡಚಾದ್ರಿ ಸಂಜೀವಿನಿ ವೇದಿಕೆ ಸಜ್ಜಾಗಿದೆ.
ಆದರೆ ಅದಾಗಲೇ ಗುಡ್ಡ ಅಗೆದು ನೂರಾರು ಟನ್ ಅದಿರು ತೆಗೆದ ಪರಿಣಾಮ ಪಶ್ಟಿಮಘಟ್ಟಕ್ಕೆ ಮುಕುಟಪ್ರಾಯವಾದ ಅಂಬಾರಗುಡ್ಡದಲ್ಲಿ ಭಯಾನಕ ಕಮರಿಗಳು ಬಿದ್ದಿವೆ. ಅದಿರುಮಿಶ್ರಿತ ಮಣ್ಣು ಹೇರಳವಾಗಿ ಸುತ್ತಮುತ್ತಲಿನ ಕೃಷಿ ಜಮೀನಿಗೆ ನುಗ್ಗಿ ರೈತರಲ್ಲಿ ಆತಂಕ ಹುಟ್ಟಿಸಿದೆ.
ರಾಜ್ಯದ ಪ್ರಮುಖ ಲಿಂಗನಮಕ್ಕಿ ಡ್ಯಾಂನಲ್ಲಿ ಒಂದು ಅಂದಾಜಿನ ಪ್ರಕಾರ ಶೇ.೨೪ ರಷ್ಟು ಹೂಳು ತುಂಬಿದ್ದು, ಗುಡ್ಡದ ಮಣ್ಣು ಹೂಳನ್ನು ಇನ್ನಷ್ಟು ಹೆಚ್ಚಿಸಿದೆ.
ಸಂರಕ್ಷಿತ ಅರಣ್ಯ ಪರಿಸರಪ್ರೇಮಿಗಳ ಹೋರಾಟದ ಫಲವಾಗಿ ಅಂಬಾರಗುಡ್ಡ ಗಿರಿಪ್ರದೇಶವನ್ನು ಸರ್ಕಾರ ೨೦೦೮ರಲ್ಲಿ ವಿಶೇಷ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದೆ. ಭಾರತೀಯ ವಿಜ್ಞಾನ ಮಂದಿರದ ತಂಡವು ನಡೆಸಿದ ಸಂಶೋಧನೆ ಈ ಪ್ರದೇಶದ ಮಹತ್ವ ಸಾರಿದೆ. ಅಲ್ಲದೇ ಜೀವ ವೈವಿಧ್ಯ ಮಂಡಳಿ ಕೂಡ ಸೂಕ್ಷ್ಮ ಜೈವಿಕ ಪರಿಸರ ಎಂದು ಘೋಷಿಸುವಂತೆ ವರದಿ ನೀಡಿದೆ. ಒಟ್ಟಾರೆ ಅಂಬಾರಗುಡ್ಡ ಗಣಿ ವಿಪತ್ತಿನಿಂದ ಕುಸಿದರೇ ಶರಾವತಿ ಕಣಿವೆಯೇ ನಾಶವಾಗುತ್ತದೆ ಎಂಬುದು ತಜ್ಞರ ಅಭಿಮತ.
ಎಲ್ಲಿದೆ?: ಅಂಬಾರಗುಡ್ಡ ಸಾಗರ ತಾಲೂಕಿನ ಕಾರ್ಗಲ್ ಅರಣ್ಯವ್ಯಾಪ್ತಿಗೆ ಸೇರಿದ ಮರಾಠಿ ಗ್ರಾಮದಲ್ಲಿದೆ. ಸಾಗರದಿಂದ ತುಂಬ್ರಿ ಮಾರ್ಗವಾಗಿ, ಹೊಸನಗರದಿಂದ ನಿಟ್ಟೂರು ಮಾರ್ಗವಾಗಿ ಗಿರಿಯನ್ನು ತಲುಪಬಹುದು. ಚಾರಣ ಮಾಡಲು ಚೆನ್ನ. ಗಿರಿವರೆಗೆ ವಾಹನದಲ್ಲೂ ತಲುಪಬಹುದು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11
|
|
|