ಮಂಗಳೂರು: ಎದುರುಪದವು: ಗ್ರಾಮಾಭಿವೃದಿಯಲ್ಲಿ ದಂಪತಿಯ ಸಾಧನೆ; ಸಾಕ್ಷರತೆ, ಸ್ವಸಹಾಯ ಗುಂಪು ರಚನೆಯ ಮೂಲಕ ಗ್ರಾಮಾಭಿವೃದ್ಧಿಗೆ ಶ್ರಮಿಸಿದ ಎಲೆಮರೆಯ ಕಾಯಿಗಳಿವರು |
ಪ್ರಕಟಿಸಿದ ದಿನಾಂಕ : 2010-03-22
ಮಂಗಳೂರು, ಮಾ.೧೮: ಒಂದು ಕುಟುಂಬದ ಅಭಿವೃದ್ಧಿಯಲ್ಲಿ ಆ ಕುಟುಂಬದ ಯಜಮಾನನ ಚಿಂತನೆ, ಕೆಲಸಕಾರ್ಯ, ಸಾಧನೆಗಳು ಮಹತ್ವದ್ದಾಗಿದ್ದರೆ ಒಂದು ಗ್ರಾಮದ ಅಭಿವೃದ್ಧಿಯಲ್ಲಿ ಅಲ್ಲಿನ ಜನರ ನಡುವಿನ ಅನ್ಯೋನ್ಯತೆ, ಸೌಹಾರ್ದತೆ ಜೊತೆಗೆ ಶ್ರಮ ಪ್ರಮುಖ ಪಾತ್ರ ವಹಿಸುತ್ತವೆ. ಈ ರೀತಿಯಾಗಿ ಇಂದು ನಮ್ಮ ಭಾರತದಲ್ಲಿ, ಕರ್ನಾಟಕದಲ್ಲಿ ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಬಹಳಷ್ಟು ಗ್ರಾಮಗಳಲ್ಲಿ ಇಲ್ಲೊಂದು ಪುಟ್ಟ ಗ್ರಾಮವಿದೆ. ಮಂಗಳೂರು ತಾಲೂಕಿಗೆ ಸೇರಿದ ಈ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಅದರಲ್ಲೂ ಮುಖ್ಯವಾಗಿ ಸಾಕ್ಷರ ಗ್ರಾಮ, ಸ್ವಾವಲಂಬಿ ಗ್ರಾಮವಾಗಿ ಬೆಳೆದ ಹೆಜ್ಜೆ ಗುರುತುಗಳಲ್ಲಿ ಜನರ ಶ್ರಮದ ಜೊತೆಗೆ ಎಲೆಮರೆಯ ಕಾಯಿಗಳಾಗಿ ಉಳಿದಿರುವ ದಂಪತಿಯ ಅಪರಿಮಿತ ಆಸಕ್ತಿ, ಜನರ ಕಷ್ಟ ಸುಖಗಳಲ್ಲಿ ಬೆರೆತು ಅವರ ಬೆಂಗಾವಲಾಗಿ ನಿಲ್ಲುವಲ್ಲಿ ಇಂದಿಗೂ ಅವರಲ್ಲಿ ತೋರುವ ಅದಮ್ಯ ಉತ್ಸಾಹ ಶ್ಲಾಘನೀಯ.
ವನ್ಯ ಜೀವಿ, ಪ್ರಾಕೃತಿಕ ತಾಣವಾಗಿ ಇಂದು ರೂಪುಗೊಂಡಿರುವ ಪಿಲಿಕುಳ ನಿಸರ್ಗಧಾಮಕ್ಕೆ ತಾಗಿಕೊಂಡಿರುವ ಮೂಡುಶೆಡ್ಡೆ ಗ್ರಾಮದ ಎದುರುಪದವು ಸುಮಾರು ೨೦-೩೦ ವರ್ಷಗಳ ಹಿಂದೆ ಬೋಳು ಗುಡ್ಡೆಯಾಗಿತ್ತು. ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಈ ಗ್ರಾಮ ಅನಕ್ಷರಸ್ಥರು, ಕಷ್ಟ ಜೀವಿಗಳಿಂದ ತುಂಬಿತ್ತು. ಅಕ್ಕಪಕ್ಕದ ಗದ್ದೆಗಳಲ್ಲಿ, ಕಾರ್ಖಾನೆ ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಇಲ್ಲಿನ ಜನರು ಕಷ್ಟಜೀವಿಗಳು.
ಅಲ್ಲಿನ ನೂರಾರು ಕುಟುಂಬಗಳಲ್ಲಿ ಎಸ್.ಮುಹಮ್ಮದ್ ಮತ್ತು ಪಾತುಂಞಿಯವರ ತುಂಬಿದ ಕುಟುಂಬವೂ ಬಡತನದ ಬೇಗೆಯಲ್ಲೇ ದಿನದೂಡುತ್ತಿದ್ದ ಕಾಲವದು. ಈ ದಂಪತಿಗೆ ಎಂಟು ಮಂದಿ ಮಕ್ಕಳು. ಐದು ಮಂದಿ ಹೆಣ್ಣು, ಮೂರು ಗಂಡು ಮಕ್ಕಳು. ಆ ಸಮಯಕ್ಕೆ ವಾಮಂಜೂರಿನ ಧರ್ಮಜ್ಯೋತಿ ಸಂಸ್ಥೆಗೆ ಬಂದ್ದ ಸಿಸ್ಟರ್ ಮರಿಯಾ ಗೊರೆಟ್ಟಿಯವರು ವಾರಕ್ಕೊಮ್ಮೆ ಈ ಎದುರುಪದವು ಗ್ರಾಮದ ಜನರ ಕಷ್ಟ ಸುಖಗಳನ್ನು ವಿಚಾರಿಸಲು ಬರುತ್ತಿದ್ದರು. ಹಾಗೆ ಬಂದವರು ಕೇವಲ ಇಲ್ಲಿನ ಜನರ ಸಮಸ್ಯೆಗಳಿಗೆ ಸಾಂತ್ವನ ಹೇಳಿ ಸುಮ್ಮನಾಗಲಿಲ್ಲ. ಜನರ ಸಮಸ್ಯೆಗಳಿಗೆ ಅವರಿಂದಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜನರ ಸಂಘವೊಂದನ್ನು ರಚಿಸಲು ಸಿಸ್ಟರ್ ಗೊರಟ್ಟಿಯವರು ನೀಡಿದ ಮಾರ್ಗದರ್ಶನದ ಮೇರೆಗೆ ೧೯೮೧ರ ಆಗಸ್ಟ್ ತಿಂಗಳಲ್ಲಿ ‘ಕಷ್ಟಕಾರಿ ಕಾರ್ಮಿಕರ ಸಂಘ’ವೊಂದು ರಚನೆಯಾಯಿತು. ನಂತರ ಇದು ಗ್ರಾಮಾಭಿವೃದ್ಧಿ ಸಂಘವಾಗಿ ಹೆಸರು ಪಡೆಯಿತು.
ಸಂಘದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದ ಜಯರಾಮ ಎಸ್. ಕೊಟ್ಟಾರಿ ಸುಮಾರು ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಗ್ರಾಮಾಭಿವೃದ್ಧಿಯಲ್ಲಿ ಸಣ್ಣ ಸಣ್ಣ ಹೆಜ್ಜೆಗಳನ್ನಿರಿಸಿದರೆ, ೧೯೮೬-೮೭ನೆ ಸಾಲಿನಲ್ಲಿ ಅಧ್ಯಕ್ಷೆಯಾಗಿ ಸತ್ಯವತಿ ಶೆಟ್ಟಿಯವರು ಆಯ್ಕೆಯಾಗಿ ಎರಡು ವರ್ಷಗಳ ಕಾಲ ಗ್ರಾಮದ ಅಭಿವೃದ್ಧಿಯಲ್ಲಿ ಕೈಯಾಡಿಸಿದರು. ನಂತರ ಅಂದರೆ ೧೯೮೮-೮೯ನೆ ಸಾಲಿನಲ್ಲಿ ಗ್ರಾಮದ ಅಭಿವೃದ್ಧಿಯ ನೊಗ ಎಸ್. ಮುಹಮ್ಮದ್ರವರ ಹೆಗಲ ಮೇಲೆ ಬಿತ್ತು.
ಬಡತನದ ಬೇಗೆಯ ನಡುವೆಯೇ ತುಂಬಿದ ಸಂಸಾರದ ಭಾರದ ಜೊತೆಗೆ ಗ್ರಾಮಾಭಿವೃದ್ಧಿಯ ಹೊಣೆಯನ್ನು ಸವಾಲಾಗಿಯೇ ಸ್ವೀಕರಿಸಿದ ಎಸ್. ಮುಹಮ್ಮದ್ರವರಿಗೆ ಸಾಥ್ ನೀಡಿದ್ದು ಅವರ ಪತ್ನಿ ಪಾತುಂಞಿ. ಈ ದಂಪತಿಗಳಿಬ್ಬರೂ ಅಲ್ಪಸ್ವಲ್ಪ ಪ್ರಾಥಮಿಕ ಶಾಲಾನುಭವ ಹೊಂದಿದ್ದರಿಂದ ಶಿಕ್ಷಣದ ಬಗ್ಗೆ ಅಪಾರ ಗೌರವ, ಪ್ರೀತಿಯನ್ನು ಹೊಂದಿದ್ದರು. ಹಾಗಾಗಿಯೇ ೧೯೯೦-೯೧ರಲ್ಲಿ ಜಿಲ್ಲೆಗೆ ಕಾಲಿಟ್ಟ ಸಾಕ್ಷರತಾ ಯೋಜನೆ ಈ ದಂಪತಿಯ ಅದಮ್ಯ ಉತ್ಸಾಹ, ಸಾಧಿಸುವ ಛಲವನ್ನು ಹೆಚ್ಚಿಸುವ ಜೊತೆಗೆ ಗ್ರಾಮಾಭಿವೃದ್ಧಿಗೆ ಒತ್ತು ನೀಡಲು ಸಹಕರಿಸಿತು.
೧೯೯೦ರ ಆಗಸ್ಟ್ ೯ರಲ್ಲಿ ನಡೆದ ಸಾಕ್ಷರತಾ ಜನಗಣತಿಯಲ್ಲಿ ಈ ಗ್ರಾಮದ ಸುಮಾರು ೩೦ ಜನರು ಭಾಗವಹಿಸಿದ್ದು, ಅವರಲ್ಲಿ ಈ ದಂಪತಿಯೂ ಪ್ರಮುಖರು. ಅವರಲ್ಲಿ ಅಂದು ಜಾತಿವಾರು ಪ್ರಕಾರ ದಾಖಲಿಸಿಕೊಂಡ ಜನಗಣತಿಯ ದಾಖಲೆಗಳು ಇನ್ನೂ ಭದ್ರವಾಗಿವೆ. ೧೪ರಿಂದ ೩೫ ವರ್ಷದೊಳಗಿನವರನ್ನು ಸಾಕ್ಷರನ್ನಾಗಿಸುವ ಸರಕಾರದ ಈ ಮಹತ್ವದ ಯೋಜನೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸವೂ ಎದುರುಪದವು ಊರಿನಲ್ಲಿ ನಡೆಯಿತು. ಊರಿನ ಬಹಳಷ್ಟು ಮಂದಿಗೆ ಕಲಿಯಲೇನೋ ಆಸಕ್ತಿ ಇತ್ತು.
ಆದರೆ ಎಲ್ಲರೂ ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದವರಾದ್ದರಿಂದ ಒಂದು ದಿನ ಕೂಲಿಗೆ ತಪ್ಪಿದರೂ ಆ ದಿನ ಆ ಕುಟುಂಬ ಉಪವಾಸ ಬೀಳುತ್ತದೆ. ಹಾಗಾಗಿ ಪುರುಷರಿಗೆ ರಾತ್ರಿಯಲ್ಲಿ ಕಲಿಕೆಗೆ ಗ್ರಾಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಚಿಮಿಣಿ ದೀಪದ ಬೆಳಕಿನಲ್ಲಿ ಅವಕಾಶ ಕಲ್ಪಿಸಲಾಯಿತು. ಹಾಗಿದ್ದರೂ ಮಹಿಳೆಯರ ಕಲಿಕೆಗೆ ಸಾಕಷ್ಟು ಎಡರು ತೊಡರುಗಳು ಕಂಡು ಬಂದವು. ಕೆಲ ಮಹಿಳೆಯರಲ್ಲಿ ಆಸಕ್ತಿ ಇದ್ದರೂ, ಹೆಂಗಸರು ಕಲಿತೇನು ಆಗಬೇಕೆಂಬ ಮೂದಲಿಕೆ, ಕಲಿಸುವವರು ಯಾರೆಂಬ ಚಿಂತೆ, ಎಲ್ಲಿ ಕಲಿಸುವುದೆಂಬ ಆತಂಕ ಕಾಡಿದಾಗ ಕೊನೆಗೆ ಎಸ್. ಮುಹಮ್ಮದ್ರವರು ತಮ್ಮ ಪತ್ನಿಯನ್ನು ಊರಿನ ಆಸಕ್ತ ಮಹಿಳೆಯರಿಗೆ ಕಲಿಸಲು ಪ್ರೇರೇಪಿಸಿದರು.

ಹಾಗಾಗಿ ಮುಹಮ್ಮದ್ ಪಾತುಂಞಿಯವರ ಮನೆಯೇ ಕಲಿಕಾ ಶಾಲೆಯಾಗಿ ರೂಪುಗೊಂಡಿತು. ಪತಿಯ ಸಹಕಾರ, ಮಕ್ಕಳ ಪ್ರೋತ್ಸಾಹದೊಂದಿಗೆ ಊರಿನ ಅನಕ್ಷರಸ್ಥ ಮಹಿಳೆಯರಿಗೆ ಕಲಿಕೆಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ ಪಾತುಂಞಿ ಯವರಿಗೆ ಊರಿನವರ ಬೆಂಬಲವೂ ದೊರಕಿತು. ಪಾಳಿಯಂತೆ ಒಟ್ಟು ೨೬ ಮಹಿಳೆಯರಿಗೆ ಪಾತುಂಞಿಯವರು ಮನೆಯಲ್ಲೇ ನಾಲ್ಕು ತಿಂಗಳ ಕಾಲ ಸಾಕ್ಷರತೆ ಯೋಜನೆಯನ್ನು ಸಾಕಾರಗೊಳಿಸಿದರು. ಯೋಜನೆಯು ಮತ್ತೆ ಎರಡು ತಿಂಗಳಿಗೆ ವಿಸ್ತರಿಸಿದಾಗಲೂ ಈ ದಂಪತಿಗಳು ಈ ಕಾರ್ಯದಲ್ಲಿ ಅತ್ಯಂತ ಹುಮ್ಮನಿಸಿನಿಂದ ತೊಡಗಿಕೊಂಡರು. ಬಳಿಕ ದ.ಕ. ಜಿಲ್ಲೆಗೆ ಸಾಕ್ಷರತಾ ಯೋಜನೆಗೆ ನೀಡಲಾಗಿದ್ದ ಎರಡು ಕೋಟಿ ರೂ.ಗಳಲ್ಲಿ ಹಣ ಉಳಿಕೆಯಾದಾಗ ಆರಂಭಗೊಂಡ ನಿರಂತರ ಶಿಕ್ಷಣದಲ್ಲೂ ಈ ದಂಪತಿಯ ಭಾಗವಹಿಸುವಿಕೆ ಹಿಂದಿನಂತೆಯೇ ಮುಂದುವರಿಯಿತು. ಹೀಗೆ ಎದುರುಪದವು ಗ್ರಾಮದಲ್ಲಿ ಮುಂದುವರಿದ ಸಾಕ್ಷರತೆ ಯೋಜನೆಯಲ್ಲಿ ನವಸಾಕ್ಷರರಾದವರು ಹೊರ ಜಗತ್ತಿನ, ಸರಕಾರದ ಸೌಲಭ್ಯಗಳ ಬಗ್ಗೆ ಅರಿವನ್ನು ಪಡೆಯುವಂತಾಯಿತು. ಸಾಕ್ಷರತೆಯ ಜೊತೆಗೆ ಸ್ವ ಉದ್ಯೋಗಕ್ಕೆ ಇಂಬು ಕೊಡುವ ನಿಟ್ಟಿನಲ್ಲಿ ಹೊಲಿಗೆ ತರಬೇತಿಗೆ ಈ ದಂಪತಿ ಪ್ರೋತ್ಸಾಹ ನೀಡಿದರು. ತಮ್ಮ ಹೆಣ್ಣು ಮಕ್ಕಳಿಗೂ ಹೊಲಿಗೆ ಕಲಿಸಿ ಅವರ ಮೂಲಕ ಊರಿನ ಹೆಣ್ಣು ಮಕ್ಕಳಿಗೆ ಉಚಿತವಾಗಿ ಹೊಲಿಗೆ ತರಬೇತಿ ನೀಡಲು ಪ್ರೋತ್ಸಾಹಿಸಿದರು.
ಎದುರುಪದವಿನಲ್ಲಿ ಸಾಕ್ಷರತೆಯ ಮೂಲಕ ನವಸಾಕ್ಷರೆಯಾಗಿ ಮೂಡಿಬಂದ ಬಿಫಾತಿಮ ನವಸಾಕ್ಷರರ ಜಿಲ್ಲಾ ಮಟ್ಟದ ಕಾರ್ಯದರ್ಶಿಯಾಗಿ, ತಾಲೂಕು ಮಟ್ಟದಲ್ಲಿ ಅಧ್ಯಕ್ಷೆಯಾಗಿ ಅಧಿಕಾರಿಗಳ ಜೊತೆ ಸಮಾಲೋಚನಾ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಇಷ್ಟಕ್ಕೆ ಈ ದಂಪತಿ ಸುಮ್ಮನಾಗಲಿಲ್ಲ. ತಮ್ಮ ಮಕ್ಕಳ ಆಸಕ್ತಿಗೆ ಅನುಸಾರವಾಗಿ ಅವರಿಗೆ ವಿದ್ಯಾಭ್ಯಾಸ ನೀಡಿದ ಇವರು, ಊರಿನವರ ಪ್ರತಿಯೊಂದು ಸಮಸ್ಯೆ, ಕಷ್ಟ ಸುಖಗಳಲ್ಲೂ ಭಾಗಿಯಾದರು. ಸಾಕ್ಷರತೆಯ ಮೂಲಕ ಹೊಸ ಜೀವನೋತ್ಸಾಹ ಪಡೆದ ಈ ಗ್ರಾಮದ ಜನರ, ಈ ದಂಪತಿಗಳ ಸಾಧನೆಗೆ ಬೆಂಗಾವಲಾಗಿ ನಿಂತಿದ್ದ ಸಿಸ್ಟರ್ ಗೊರಟ್ಟಿಯವರ ಪ್ರೇರಣೆಯ ಮೇರೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗುವ ದಾರಿಯನ್ನು ಕಂಡುಕೊಳ್ಳಲಾಯಿತು. ವಾರಕ್ಕೆ ೧೦ ರೂ.ಗಳಂತೆ ಉಳಿಕೆಯೊಂದಿಗೆ ಮಹಿಳೆಯರಿಂದಲೇ ಆರಂಭವಾದ ಈ ಗ್ರಾಮದ ಸ್ವಸಹಾಯ ಗುಂಪು ಧರ್ಮಸ್ಥಳದ ಸ್ವಸಹಾಯ ಯೋಜನೆ ಈ ಗ್ರಾಮಕ್ಕೆ ಕಾಲಿಡುವ ಮೊದಲೇ ಆರಂಭಗೊಂಡಿತ್ತು ಎನ್ನುವುದು ವಿಶೇಷ. ಹೀಗೆ ಒಟ್ಟು ೨೩ ಸ್ವಸಹಾಯ ಗಂಪುಗಳು ರಚನೆಯಾದವು. ಈ ಸ್ವಸಹಾಯ ಗುಂಪು ರಚನೆಯಲ್ಲಿ ಈ ದಂಪತಿಯ ಪಾತ್ರ ಮಹತ್ತರವಾದುದು. ಉಳಿಕೆಯ ಹಣವನ್ನು ಸಂಗ್ರಹಿಸಿ ಬ್ಯಾಂಕ್ನಲ್ಲಿ ಠೇವಣಿಯಿರಿಸಿ, ಅಗತ್ಯವಿರುವವರಿಗೆ ಸಾಲ ಸೌಲಭ್ಯ ಕಲ್ಪಿಸುವ ಅತ್ಯಂತ ಕ್ಲಿಷ್ಟಕರ ಜವಾಬ್ಧಾರಿಯನ್ನು ಪಾತುಂಞಿಯವರು ವಹಿಸಿಕೊಂಡರು. ಪ್ರಸ್ತುತ ಕೆಲ ಗುಂಪುಗಳು ನೆಲಕಚ್ಚಿದ್ದರೆ, ೧೩ ಗುಂಪುಗಳನ್ನು ನವೋದಯ ಸ್ವಸಹಾಯ ಸಂಘಕ್ಕೆ ಪಾತುಂಞಿಯವರು ವಹಿಸಿಕೊಟ್ಟಿದ್ದಾರೆ.
ಪ್ರಸ್ತುತ ಪಾತುಂಞಿಯವರು ಮೂರು ಗುಂಪುಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಹೀಗೆ ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮದೇ ರೀತಿಯಲ್ಲಿ ಸದ್ದಿಲ್ಲದೆ ಕೊಡುಗೆ ನೀಡುತ್ತಾ ಸಾಗಿದ ಈ ದಂಪತಿ, ಊರಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಆಶ್ರಯ ಮನೆ, ನಿವೇಶನ ಪತ್ರ ಹೀಗೆ ನಾನಾ ರೀತಿಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನರು ಹಾಗೂ ಸರಕಾರದ ನಡುವಿನ ಕೊಂಡಿಗಳಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಮೂಲಕ ಜನರ ಪ್ರೀತಿಗೆ ಪಾತ್ರರಾದರು. ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ ಮೊದಲಾದ ತಮ್ಮ ವೈಯಕ್ತಿಕ ಸಮಸ್ಯೆಗಳ ನಡುವೆಯೂ ಜನರ ಜೊತೆ ಬೆರೆತ ಈ ದಂಪತಿ ಇಂದಿಗೂ ತಮ್ಮ ಜನಪರ ಸೇವೆಯ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ. ಪಿಲಿಕುಳದ ಕೆರೆಯನ್ನು ಉಳಿಸುವ ಹೋರಾಟ ದಲ್ಲಿಯೂ ಈ ದಂಪತಿಯ ಪಾತ್ರವಿದೆ. ಜನರ ಪ್ರೀತಿಯಿಂದಾಗಿಯೇ ಎದುರುಪದವು ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ೧೯೮೮-೮೯ನೆ ಸಾಲಿನಲ್ಲಿ ಜನಪರ ಸೇವೆಯ ಹೊಣೆಯನ್ನು ಹೊತ್ತ ಎಸ್. ಮುಹಮ್ಮದ್ರವರು ಸತತ ೧೬ ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿದಿದ್ದರು. ಪ್ರಸ್ತುತ ಸುಮಾರು ೬೫ರ ಹರೆಯದ ಮುಹಮ್ಮದ್ ಸಂಘದ ಕೋಶಾಧಿಕಾರಿಯಾಗಿದ್ದು, ಪಾತುಂಞಿಯವರು ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೂಲಿಯ ಸಂಪಾದನೆಯಲ್ಲೇ ತಮ್ಮ ಮಕ್ಕಳಿಗೆ ಮದುವೆ (ಐದು ಹೆಣ್ಣು ಮಕ್ಕಳಲ್ಲಿ ನಾಲ್ಕು ಮಂದಿಗೆ ವಿವಾಹವಾಗಿದ್ದರೆ, ಮೂವರು ಗಂಡು ಮಕ್ಕಳಲ್ಲಿ ಇಬ್ಬರಿಗೆ ವಿವಾಹವಾಗಿದೆ) ಶಿಕ್ಷಣ ನೀಡಿರುವ ಇವರ ಮಕ್ಕಳಲ್ಲಿ ಕಿರಿಯವಳಾದ ತಾಯಿರಾ ಬಾನು ಪ್ರಸ್ತುತ ಕಾನೂನು ಪದವಿ(ಐದು ವರ್ಷಗಳ)ಯ ಅಂತಿಮ ವರ್ಷದ ಅಧ್ಯಯನದಲ್ಲಿ ನಿರತರಾಗಿದ್ದಾರೆ.
‘ವಾರ್ತಾಭಾರತಿ’ ಪತ್ರಿಕೆಯ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡ ಈ ದಂಪತಿಗಳ ಕಣ್ಣುಗಳಲ್ಲಿ ಇನ್ನೂ ಉತ್ಸಾಹದ ಸೆಲೆಯಿದೆ. ಕಾಲಿನ ಗಂಟು ಬೇನೆಯಿಂದ ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ಪಡೆದು ಮನೆಗೆ ಬಂದ ಮಾರನೆಯ ದಿನವೇ ‘ಇಂದು ಮಧ್ಯಾಹ್ನದ ಮೇಲೆ ನನಗೆ ಮಂಗಳೂರಿಗೆ ಮೀಟಿಂಗೊಂದಕ್ಕೆ ಹೋಗಲಿಕ್ಕಿದೆ’ ಎಂದು ಪಾತುಂಞಿಯವರು ಹೇಳುವಾಗ ಜನಸೇವೆಯ ಬಗೆಗಿನ ಅವರ ಕಾಳಜಿಯನ್ನು ಊಹಿಸಬಹುದು.
“ಸಾಕ್ಷರತೆ ನಮ್ಮ ಗ್ರಾಮದ ಜನರ ಸ್ವರೂಪವನ್ನೇ ಬದಲಾಯಿಸಿತು. ಇಲ್ಲಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ನಮ್ಮಲ್ಲಿ ಉತ್ಸಾಹ ತುಂಬಿದ ಸಿಸ್ಟರ್ ಗೊರಟ್ಟಿಯವರ ಮೂಲಕ ಗ್ರಾಮಾಭಿವೃದ್ಧಿಗೆ ನಾಂದಿ ಹಾಡಲಾಯಿತಾದರೆ, ಸಾಕ್ಷರತೆಯ ಮೂಲಕ ತಮ್ಮ ಊರಿನ ಪ್ರತಿಯೊಂದು ಮನೆ ಮನೆಗಳಿಗೂ ಭೇಟಿ ನೀಡಿ ಅರಿವು ಮೂಡಿಸಿದ ಕೆಲ ಅಧಿಕಾರಿಗಳು ಹಾಗೂ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯರು ಈ ಜಿಲ್ಲೆಗೇ ಒಂದು ಕೊಡುಗೆ” ಎಂದು ಮೆಚ್ಚುಗೆ ವ್ಯಕ್ತಪಡಿಸುವ ಎಸ್. ಮುಹಮ್ಮದ್ “ಇಂದು ನಮ್ಮ ಊರಿನಲ್ಲಿ ಒಬ್ಬರೇ ಒಬ್ಬರು ಅನಕ್ಷರಸ್ಥರು ಇಲ್ಲ ಎಂದು ಹೇಳಲು ಹೆಮ್ಮೆಯಾಗುತ್ತದೆ” ಎನ್ನುವಾಗ ಅವರ ಕಣ್ಣುಗಳಲ್ಲಿ ಅದೇನೋ ಸಾಧಿಸಿದ ಧನ್ಯತಾ ಭಾವವನ್ನು ಕಾಣಬಹುದು.
“ನಮ್ಮ ಗ್ರಾಮದ ಅಭಿವೃದ್ಧಿಯಲ್ಲಿ ಕ್ರೈಸ್ತ, ಮುಸ್ಲಿಂ, ಹಿಂದೂಗಳೆಂಬ ಧರ್ಮ, ಜಾತಿಗಳು ಅಡ್ಡಿಯಾಗಿಲ್ಲ. ಇಲ್ಲಿ ಹರಿಜನ, ಹಾಗೂ ವಿಭಿನ್ನ ಜಾತಿಯ ಎಲ್ಲರೂ ಸೌಹಾರ್ದದಿಂದಿದ್ದಾರೆ. ಪ್ರತಿಯೊಬ್ಬರು ಪರಸ್ಪರರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ. ಹಾಗಾಗಿಯೇ ಇಲ್ಲಿ ಯಾವುದೇ ರೀತಿಯ ಮತೀಯ ಗಲಭೆ, ಮತಾಂತರವೆಂಬ ಗುಲ್ಲು, ಕೋಮುಗಲಭೆಯ ಸೋಂಕು ನಮ್ಮ ಊರಿಗೆ ತಗಲಿಲ್ಲ ಎಂದು ಹೇಳಲು ಸಂತಸವಾಗುತ್ತದೆ. ಯಾವುದೇ ರೀತಿಯ ಸಣ್ಣಪುಟ್ಟ ಗಲಭೆ, ವೈಮನಸ್ಸುಗಳು ನಡೆದರೂ ಇಲ್ಲಿನ ಧಾರ್ಮಿಕ ಮುಖಂಡರು ಪರಸ್ಪರ ಮಾತುಕತೆಯ ಮೂಲಕವೇ ಬಗಹರಿಸುತ್ತಾರೆ” ಎಂದು ಮುಹಮ್ಮದ್ರವರು ಹೇಳುವಾಗ ‘ಸುಖ ಇರುವವರಿಗೆ ಜನರ ಪ್ರೀತಿ ಸಿಗುವುದು ಕಡಿಮೆ. ನಾವು ಆರ್ಥಿಕವಾಗಿ ಸುಖವನ್ನು ಅನುಭವಿಸದಿದ್ದರೂ ಜನರ ಪ್ರೀತಿ ನಮಗೆ ಎಲ್ಲಕ್ಕಿಂತ ಹೆಚ್ಚಿನ ಮನಸ್ಸಿನ ನೆಮ್ಮದಿ ನೀಡಿದೆ. ಇಲ್ಲಿನ ಜನರೆಲ್ಲರೂ ನಮ್ಮ ಜೊತೆಗಿದ್ದಾರೆ ಎನ್ನುವ ಸಂತಸ ನಮಗಿದೆ.’ ಎಂದು ಪತಿಯ ಮಾತಿಗೆ ಧ್ವನಿಗೂಡಿಸುತ್ತಾರೆ ಪಾತುಂಞಿ.
ಒಟ್ಟು ಒಂದು ಗ್ರಾಮದ ಅಭಿವೃದ್ಧಿಗೆ ಕೇವಲ ಚಿಂತನೆ, ಮನಸ್ಸು, ಆಸಕ್ತಿ ಮಾತ್ರ ಸಾಲದು. ಸಾಧಿಸಿ ತೋರಿಸುವ ಕೆಚ್ಚು ಕೂಡಾ ಅಗತ್ಯ ಎಂಬುದಕ್ಕೆ ಈ ದಂಪತಿ ಒಂದು ನಿದರ್ಶನ.
| |
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22
|
|
| ಪ.ರಾಮಚಂದ್ರ , ರಾಸ್ ಲಫ್ಫಾನ್ , ಕತಾರ್ | 2010-03-25 | | ಗ್ರಾಮದ ಜನತೆ ಪಾಲ್ಗೊಂಡ ಅತ್ಯುತ್ತಮ ಸಹಭಾಗಿತ್ವದ ವರದಿಯನ್ನು ನಾಡಿನ ಜನತೆಗೆ ಬಿತ್ತರಿಸಿದ "ಗಲ್ಫ್ ಕನ್ನಡಿಗ" ವೃಂದಕ್ಕೆ ವಂದನೆಗಳು. |
| Ibrahim Hussain, Udipi, Karnataka | 2010-03-23 | | ಈ ಲೇಖನವನ್ನು ಓದಿ ನನ್ನ ಅಂತರಾಳದಿಂದ ಸಂತೋಷ ಪಟ್ಟೆನು ಮತ್ತು ಕಣ್ಣನ್ನು ಒರೊಸಿಕೊಂಡೆ. ಮುಹಮ್ಮದ್ ಮತ್ತು ಪಾತುಂಞಿ ಎಂಬ ಈ ದಂಪತಿಗಳು ಎಲ್ಲರಿಗೆ ಮಾದರಿಯಾಗಿರುವೂದು ಅದರಲ್ಲೂ ಮುಸ್ಲಿಮ್ ಸಮುದಾಯಕ್ಕೆ ಹೆಮ್ಮೆಯ ವಿಚಾರ. ಇವರ ಸಮಾಜ ಸೇವಾ ಮನೋಭಾವವನ್ನು ಅಲ್ಲಾಹನು ಮೆಚ್ಚಿ ಇವರಿಗೆ ದೀರ್ಘಾಯುಷ್ಯವನ್ನು, ಸಂಸಾರದಲ್ಲಿ ಸುಖವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. |
| Max, Brk | 2010-03-23 | | That is Great, allah avara yella sat karya galannu neraverisaly..We are with u Sir... |
|