
ಮಂಗಳೂರು/ಉಳ್ಳಾಲ,ಸೆಪ್ಟಂಅಬರ್.೧೭:ಕೋಟೆಕಾರಿನ ಖಾಸಗಿ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ದಾಖಲಾಗಿದ್ದ ಮಂಗಳೂರು ಕಾಲೇಜಿನ ವಿದ್ಯಾರ್ಥಿನಿ ಕೊಂಡಾಣ ಕಂಬಕೋಡಿ ನಿವಾಸಿ ದೀಪಿಕಾ(16)ರವಿವಾರ ಬೆಳಿಗ್ಗೆ ಅಸಹಜ ಸಾವನ್ನಪ್ಪಿದ್ದು ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ ಎಂದು ಆರೋಪಿಸಿ ಸರ್ವ ಕಾಲೇಜು ವಿಧ್ಯಾರ್ಥಿಗಳು ಇಂದು ಆಸ್ಪತ್ರೆ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದರು.

ದೀಪಿಕಾ ಸಾವಿಗೆ ವೈದ್ಯರ ನಿರ್ಲಕ್ಷ ಕಾರಣ,ಸರಿಯಾದ ಮೂಲಭೂತ ಸೌಕರ್ಯವಿರದ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸರ್ವಕಾಲೇಜು ಬಂದ್ಗೆ ಕರೆ ನೀಡಿ ಕೋಟೆಕಾರ್ ಆಸ್ಪತ್ರೆಯ ಮುಂಬಾಗದಲ್ಲಿ ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದ ವಿಧ್ಯಾರ್ಥಿಗಳು ಬಳಿಕ ಆಸ್ಪತ್ರೆ ಎದುರಿನಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗದಲ್ಲಿ ಸಭೆ ಸೇರಿದರು.

ಬಳಿಕ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಅಸ್ಪತ್ರೆಯ ವೈಧ್ಯಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಮೃತ ವಿಧ್ಯಾರ್ಥಿನಿಯ ಸಹೋದರರು ಛಾಯಚಿತ್ರಗಾರರಾಗಿರುವುದರಿಂದ ಇಂದಿನ ಈ ಬಂದ್ಗೆ ದ.ಕ.ಜಿಲ್ಲಾ ಫೋಟೋಗ್ರಾಫರ್ ಎಸೋಸಿಯೇಶನ್ ಬೆಂಬಲ ಸೂಚಿಸಿ ಅವರು ಈ ಬಂದ್ನಲ್ಲಿ ಪಾಲ್ಗೊಂಡರು.ವಿದ್ಯಾರ್ಥಿನಿಯ ಸಂಬಂಧಿಕರು ಸೇರಿದಂತೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಘಟನೆ ವಿವರ:
ಕೊಂಡಾಣ ಕಂಬಕೋಡಿ ನಿವಾಸಿ ಜಯಂತ್ ಸಾಲ್ಯಾನ್ ಅವರ ಪುತ್ರಿ ದೀಪಿಕಾ ಶುಕ್ರವಾರ ರಾತ್ರಿ ಅತಿಯಾದ ವಾಂತಿಯ ಕಾರಣ ಕೋಟೆಕಾರಿನ ಜೆ.ಎಸ್.ಆಸ್ಪತ್ರೆಗೆ ದಾಖಲಾಗಿದ್ದಳು.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ದೀಪಿಕಾಳ ಹೆತ್ತವರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಿಸುವ ಕುರಿತು ಮಾಹಿತಿ ಕೇಳಿದ್ದು, ಆಸ್ಪತ್ರೆಯ ವೈಧ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಮತ್ತು ಸಾಧಾರಣ ವಾಂತಿಯಾದ ಹಿನ್ನಲೆಯಲ್ಲಿ ಬೇರೆ ಆಸ್ಪತ್ರೆಗೆ ದಾಖಲಿಸುವುದು ಬೇಡ ಎಂದಿದ್ದರು ಎಂದು ದೀಪಿಕಾಳ ಸಂಬಂಧಿಕರು ತಿಳಿಸಿದ್ದರು.
ಶನಿವಾರ ಸಂಜೆಯವರೆಗೆ ಆರೋಗ್ಯವಾಗಿದ್ದ ದೀಪಿಕಾಳ ಸ್ಥಿತಿ ರಾತ್ರಿ ವೇಳೆಗೆ ವಿಷಮಗೊಂಡಿದ್ದು,ವೈದ್ಯರು ಈಕೆಯ ಚಿಕಿತ್ಸೆಗೆ ಆಗಮಿಸಿರಲಿಲ್ಲ.ರವಿವಾರ ಬೆಳಿಗ್ಗೆ 4ಗಂಟೆಗೆ ದೀಪಿಕಾ ಮೃತಪಟ್ಟಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ದೀಪಿಕಾಗೆ ನೀಡಿರುವ ಚುಚ್ಚುಮದ್ದು ಮತ್ತು ಔಷದ ಬದಲಾಗಿರಬೇಕು,ಈ ಕಾರಣದಿಂದಲೇ ಮೃತಪಟ್ಟಿದ್ದಾಳೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.
ವೈದ್ಯರ ನಿರ್ಲಕ್ಯದಿಂದ ದೀಪಿಕಾ ಸಾವನ್ನಪ್ಪಿದ್ದಾಳೆ ಎಂದು ತಿಳಿಯುತ್ತಿದ್ದಂತೆ ಆಕೆಯ ಸಂಬಂಧಿಕರು ಮತ್ತು ಸಾರ್ವಜನಿಕರು ಆಸ್ಪತ್ರೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಸೇರಿದವರಲ್ಲಿ ಆಸ್ಪತ್ರೆಯ ಕಿಟಕಿ ಗ್ಲಾಸ್ಗೆ ಕಲ್ಲು ತೂರಾಟ ನಡೆಸಿ ಜಖಂ ಗೊಳಿಸಿದ್ದಾರೆ.ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.
ದ್ವಿತೀಯ ಪಿ.ಯು.ಸಿ.ವಿದ್ಯಾರ್ಥಿನಿ:

ದೀಪಿಕಾ ಮಂಗಳೂರಿನ ಸೈಂಟ್ ಆ್ಯನ್ಸ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ.ವಿದ್ಯಾರ್ಥಿನಿಯಾಗಿದ್ದಳು. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ದೀಪಿಕಾ ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾಳೆ.
ಮೆದುಳು ಸಂಬಂಧಿಕಾಯಿಲೆ ಕಾರಣ:ದೀಪಿಕಾಳ ಸಾವಿಗೆ ಮೆದುಳು ಸಂಬಂಧಿ ಕಾಯಿಲೆ ಕಾರಣ ಎಂದು ಆಸ್ಪತ್ರೆಯ ಮುಖ್ಯಸ್ಥರಾಗಿರುವ ಡಾ.ವಿಜಯ ಕುಮಾರ್ ತಿಳಿಸಿದ್ದಾರೆ.ದೀಪಿಕಾಳ ಸಾವಿಗೆ ವೈದ್ಯರ ನಿರ್ಲ್ಯಕ್ಷ ಕಾರಣ ಅಲ್ಲ ಎಂದು ಅವರು ತಿಳಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕಾರಣ ತಿಳಿಯಲಿದೆ ಎಂದಿದ್ದರು
(ವಿಶೇಷ ವರದಿ / ಚಿತ್ರ : ಸತೀಶ್ ಕಾಪಿಕಾಡ್)

























