
ಬಳ್ಳಾರಿ (ಪಿಟಿಐ): ಉತ್ತರ ಕನ್ನಡ ಜಿಲ್ಲೆ ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣ ಅದಿರು ರಫ್ತುಮಾಡಿರುವ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು ಗಣಿ ಅಕ್ರಮದಲ್ಲಿ ಬಂಧನದಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮೂವರು ಆಪ್ತರಿಗೆ ಸೇರಿರುವ ಹೊಸಪೇಟೆಯ ನಿವಾಸಗಳ ಮೇಲೆ ಶನಿವಾರ ದಾಳಿ ನಡೆಸಿ, ಶೋಧನೆ ನಡೆಸಿದರು.
ಜನಾರ್ದನ ರೆಡ್ಡಿ ಅವರ ಆಪ್ತರಾದ ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಮತ್ತು ಸೋಮಶೇಖರ್ ಅವರಿಗೆ ಸೇರಿರುವ ಹೊಸಪೇಟೆಯ ನಿವಾಸಗಳ ಮೇಲೆ ಸಿಬಿಐನ 10 ಅಧಿಕಾರಿಗಳ ತಂಡ ದಾಳಿ ನಡೆಸಿ, ಶೋಧನಾ ಕಾರ್ಯ ನಡೆಸಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಶುಕ್ರವಾರವಷ್ಟೇ ಸಿಬಿಐ ಬೇಲೆಕೇರಿ ಬಂದರಿನಿಂದ ಅಕ್ರಮ ಕಬ್ಬಿಣ ಅದಿರು ರಫ್ತು ಪ್ರಕರಣ ಕುರಿತಂತೆ ಎಫ್ಐಆರ್ವೊಂದನ್ನು ದಾಖಲಿಸಿದೆ.
ಬೇಲೆಕೇರಿ ಬಂದರಿನಿಂದ ಸುಮಾರು 34 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪಕ್ಕೆ ಒಳಗಾಗಿರುವ ನಾಲ್ಕು ಕಂಪೆನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ನೇತೃತ್ವದ `ಕೇಂದ್ರ ಉನ್ನತಾಧಿಕಾರ ಸಮಿತಿ` (ಸಿಇಸಿ) ಗುರುವಾರ ಮಹತ್ವದ ಶಿಫಾರಸು ಮಾಡಿತ್ತು.


























