ಜೈಪುರ್,ಸೆ.17:ವೇಗದಿಂದ ಧಾವಿಸಿ ಬರುತ್ತಿದ್ದ ಗೂಡ್ಸ್ ರೈಲೊಂದು ಕಾವಲುರಹಿತ ಕ್ರಾಸಿಂಗ್ನ್ನು ದಾಟುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದು, ಆರು ಮಂದಿ ಮೃತಪಟ್ಟ ದಾರುಣ ಘಟನೆ ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಮೃತಪಟ್ಟವರೆಲ್ಲರೂ ಟ್ರಕ್ ಪ್ರಯಾಣಿಕ ರಾಗಿದ್ದು, ಅವರು ಜೈಸಲ್ಮೇರ್ ಜಿಲ್ಲೆಯ ದೇವಾಲಯವೊಂದನ್ನು ಸಂದರ್ಶಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಈ ನತದೃಷ್ಟರು ಪ್ರಯಾಣಿಸುತ್ತಿದ್ದ ಟ್ರಕ್ ಇಂದು ಬೆಳಗ್ಗಿನ ವೇಳೆ ಬಿಕಾನೇರ್ ಬಳಿ ಕಾವಲು ರಹಿತ ರೈಲು ಕ್ರಾಸಿಂಗ್ ದಾಟುತ್ತಿದ್ದಾಗ, ಎದುರಿನಿಂದ ಬರುತ್ತಿದ್ದ ಗೂಡ್ಸ್ ರೈಲು ಡಿಕ್ಕಿ ಹೊಡೆದಾಗ ನಾಲ್ವರು ಸ್ಥಳದಲ್ಲೇ ಮೃತಪಟ್ಟರು ಹಾಗೂ ಉಳಿದಿಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದರು. ಘಟನೆಯಲ್ಲಿ ಇತರ ಐದು ಮಂದಿಗೆ ಗಾಯಗಳಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಳಿಕ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನೆಲೆಸಿದ್ದು, ನೂರಾರು ಮಂದಿ ಗೂಡ್ಸ್ರೈಲಿಗೆ ಬೆಂಕಿ ಹಚ್ಚಲು ಯತ್ನಿಸಿದ್ದರೆನ್ನಲಾಗಿದೆ. ಆದರೆ ಸಕಾಲದಲ್ಲಿ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರೆಂದು ಮೂಲಗಳು ತಿಳಿಸಿವೆ.


























