ಹೊಸದಿಲ್ಲಿ: ಸಬ್ಸಿಡಿಯುಳ್ಳ ಅಡುಗೆ ಅನಿಲ ಸಿಲಿಂಡರುಗಳ ಮಿತಿಯನ್ನು ವರ್ಷಕ್ಕೆ 6ರಿಂದ 9ಕ್ಕೆ ಏರಿಸಲು ಕಾಂಗ್ರೆಸ್ ಆಡಳಿತದ ರಾಜ್ಯಗಳು ನಿರ್ಧರಿಸಿವೆ. 
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಕುರಿತು ಕಾಂಗ್ರೆಸ್ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದಾರೆ ಮತ್ತು ಸಬ್ಸಿಡಿಯುಳ್ಳ ಸಿಲಿಂಡರುಗಳ ಮಿತಿಯನ್ನು ಏರಿಸಲು ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ ತಿಳಿಸಿದರು.
ಪ್ರತೀ ಕುಟುಂಬಕ್ಕೆ ವರ್ಷಕ್ಕೆ 6 ಸಿಲಿಂಡರುಗಳನ್ನು ಮಾತ್ರ ಸಬ್ಸಿಡಿ ದರದಲ್ಲಿ ಪೂರೈಸುವುದಾಗಿ ಗುರುವಾರ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಘೋಷಿಸಿ, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.
ಆ ಬಳಿಕ ದೆಹಲಿ ಸರಕಾರವು ಕೂಡ ಬಡತನ ರೇಖೆಯಿಂದ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ವರ್ಷಕ್ಕೆ 3 ಸಿಲಿಂಡರುಗಳನ್ನು ಹೆಚ್ಚು ನೀಡುವುದಾಗಿ ಘೋಷಿಸಿತ್ತು.
ಇದೀಗ ಬಿಜೆಪಿ ಮತ್ತು ಇತರ ಪಕ್ಷಗಳ ರಾಜ್ಯ ಸರಕಾರಗಳು ಏನು ಮಾಡಲಿವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪ್ರಮುಖ ಅಂಗ ಪಕ್ಷವಾದ ತೃಣಮೂಲ ಕಾಂಗ್ರೆಸ್ ಕೂಡ ಯುಪಿಎ ಸರಕಾರದಿಂದ ಹೊರಬರಲು ನಿರ್ಧರಿಸಿದೆ. ಗುರುವಾರ ಭಾರತ ಬಂದ್ ಕೂಡ ನಡೆಯಲಿರುವುದರಿಂದ ಏನಾದರೂ ಆಶಾದಾಯಕ ನಿರ್ಧಾರ ಹೊರಬರಲಿದೆ ಎಂಬುದು ಜನತೆಯ ನಿರೀಕ್ಷೆ.



























