ಹೊಸದಿಲ್ಲಿ: ‘ಟೀಂ ಅಣ್ಣಾ’ ಒಡಕು ಅಧಿಕೃತವಾಗಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಬಣವು ರಾಜಕೀಯ ಪಕ್ಷ ರಚನೆಗೆ ಹೊರಟಿರುವುದನ್ನು ವಿರೋಧಿಸಿ ಅಣ್ಣಾ ಹಜಾರೆ ಮತ್ತು ಕೆಲವು ಪ್ರಮುಖ ಭ್ರಷ್ಟಾಚಾರ-ವಿರೋಧೀ ಕಾರ್ಯಕರ್ತರು ಅವರೊಂದಿಗಿನ ಸಂಬಂಧ ಕಳಚಿಕೊಂಡಿದ್ದಾರೆ.
ರಾಜಕೀಯ ಪಕ್ಷ ರಚಿಸುವ ಕುರಿತಾಗಿ ಕೇಜ್ರಿವಾಲ್ ಮತ್ತು ಅವರ ಬೆಂಬಲಿಗರಾದ ಪ್ರಶಾಂತ್ ಭೂಷಣ್ ಮತ್ತು ಶಾಂತಿ ಭೂಷಣ್ ಜತೆ ಬುಧವಾರ ನಡೆದ ಚರ್ಚೆಯಲ್ಲಿ ಹಜಾರೆ ನೇತೃತ್ವದ ಗುಂಪು ಭಾಗವಹಿಸಿತ್ತು.
ನನ್ನ ಹೆಸರು, ಚಿತ್ರ ಬಳಸಬೇಡಿ: ಅಣ್ಣಾ
ಕಿರಣ್ ಬೇಡಿ ಮತ್ತು ಸಂತೋಷ್ ಹೆಗ್ಡೆ ಮುಂತಾದವರ ಬೆಂಬಲ ಹೊಂದಿರುವ ಅಣ್ಣಾ ಹಜಾರೆ, ಒಂಬತ್ತು ಗಂಟೆಗಳ ಕಾಲ ನಡೆದ ಮಾತುಕತೆಯ ಸಂದರ್ಭ, “ನೀವು ಬೇಕಿದ್ದರೆ ರಾಜಕೀಯ ಪಕ್ಷ ಕಟ್ಟಿಕೊಳ್ಳಿ, ಆದರೆ ಪ್ರಚಾರದ ಸಂದರ್ಭದಲ್ಲಿ ತನ್ನ ಹೆಸರು ಅಥವಾ ಭಾವಚಿತ್ರ ಬಳಸಿಕೊಳ್ಳುವಂತಿಲ್ಲ” ಎಂದು ಸ್ಪಷ್ಟಪಡಿಸಿದರು.



























