
೧೯೬೦ರ ದಶಕದ ಆರಂಭದ ದಿನಗಳವು.ಪಶ್ಚಿಮ ಘಟ್ಟಗಳ ಭಾಗವಾದ ಬಂಟಮಲೆಯ ತಪ್ಪಲಲ್ಲಿ ನಮ್ಮದು ಕೇವಲ ಐದು ಮನೆಗಳು.ಬಂಟಮಲೆಯನ್ನು ರಕ್ಷಿತಾರಣ್ಯವೆಂದು ಘೋಷಿಸಿದ ಕಾರಣ ಮತ್ತೆ ಅಲ್ಲಿ ಹೆಚ್ಚು ಮನೆಗಳು ಹುಟ್ಟಿಕೊಳ್ಳ ಲಾರದಾದುವು.ಏನಾದರೂ ವಸ್ತುಗಳು ಬೇಕಾದರೆ ಇಲ್ಲಿಂದ ಸುಮಾರು ಹತ್ತು ಕಿ.ಮೀ ದೂರದ ಪಂಜ ಪೇಟೆಗೆ ಹೋಗಿ ಬರಬೇಕು.ಆ ಕೆಲಸವನ್ನು ಅಪ್ಪ ಮಾತ್ರ ಮಾಡುತ್ತಿದ್ದರು.ಉಳಿದಂತೆ ನಾವು ಕೆಲವರು ವರುಷಕ್ಕೊಮ್ಮೆ ನಡೆಯುವ ಪಂಜ ಜಾತ್ರೆಯಲ್ಲಿ ಮಾತ್ರ ಹೊಸ ಮನುಷ್ಯರನ್ನು ಕಾಣುತ್ತಿದ್ದೆವು.ಜೊತೆಗೆ,ಪಂಜ ಜಾತ್ರೆಯಲ್ಲಿ ನೋಡಲು ಸಿಗುತ್ತಿದ್ದ ಸಣ್ಣ ದೊಡ್ಡ ಕನ್ನಡಿಗಳು,ವಿವಿಧ ದೇವರುಗಳ ಭಾವ ಚಿತ್ರಗಳು,ಧ್ವನಿವರ್ಧಕದ ಮೂಲಕ ಜೋರಾಗಿ ಕೇಳುತ್ತಿದ್ದ ಬಗೆಬಗೆಯ ಹಾಡುಗಳು, ಹತ್ತು ಪೈಸೆಗೆ ದೇಶ ತೋರಿಸುತ್ತಿದ್ದ ಮಾಂತ್ರಿಕ ದಂಡ, ಇತ್ಯಾದಿಗಳು ನಮಗೆ ಮುಂದಿನ ಒಂದು ವರುಷಕ್ಕೆ ಬೇಕಾದ ರೋಮಾಂಚವನ್ನು ಒದಗಿಸುತ್ತಿದ್ದವು.
ಕಾಡೊಳಕ್ಕೆ ಇರುವ ನಮ್ಮ ಮನೆಗೆ ಸಾಮಾನ್ಯವಾಗಿ ಆಗಾಗ ಬರುತ್ತಿದ್ದವನೆಂದರೆ ಒಬ್ಬ ಬ್ಯಾರಿ.ಅವನ ನಿಜವಾದ ಹೆಸರೇನೆಂದು ಯಾರಿಗೂ ತಿಳಿದಿಲ್ಲ.ಆತನ ತಲೆ ನುಣ್ಣಗಾಗಿದ್ದು,ಅದರಲ್ಲಿ ಒಂದೂ ಕೂದಲಿರಲಿಲ್ಲವಾದ್ದರಿಂದ ನಾವು ಅವನನ್ನು ‘ಕುಟ್ಟ ಬ್ಯಾರಿ’ ಎಂದು ಕರೆಯುತ್ತಿದ್ದೆವು. ಪಂಚೆ ಉಟ್ಟು, ಮಾಸಿದ ಅಂಗಿ ತೊಟ್ಟು, ತಲೆಯಲ್ಲಿ ಒಂದು ಗೋಣಿ ಚೀಲ ಹೊತ್ತುಕೊಂಡು,ಆತ ಬಂಟಮಲೆಯೊಳಕ್ಕೆ ಪ್ರವೇಶಿಸುತ್ತಿದ್ದ.ಬಂದವನೇ ‘ಯಜಮಾನ ಉಂಟೋ’ಅಂತ ಕೇಳುತ್ತಿದ್ದ. ‘ಇಲ್ಲ’ ಅಂದರೆ ಅಂಗಳ ದಾಟಿ ಮುಂದಿನ ಮನೆಗೆ ಮಾತಿಲ್ಲದೇ ಹೋಗುತ್ತಿದ್ದ.‘ಇದ್ದಾರೆ’ಅಂದರೆ, ಅಪ್ಪ ಬರುವವರೆಗೆ ಕಾದು ಅಪ್ಪನ ಮುಖ ಕಾಣುತ್ತಲೇ ‘ನಮಸ್ಕಾರ’ಅಂತ ಹೇಳಿ ಜಗಲಿಯ ಮೇಲೆ ಕುಳಿತು ಕಾಲನ್ನು ಅಂಗಳದತ್ತ ಇಳಿಬಿಡುತ್ತಿದ್ದ.ತಾಳಮದ್ದಳೆ ಅರ್ಥಧಾರಿಯಾಗಿದ್ದ ಅಪ್ಪ ಆತನ ಮುಂದೆ ಕಾಲುಮಡಚಿ ಕುಳಿತು ತಮ್ಮದೇ ಹರಕು ಮುರುಕು ಬ್ಯಾರಿ ಭಾಷೆಯಲ್ಲಿ ಮಾತಾಡುತ್ತಾ ಸುದೀರ್ಘ ಪಟ್ಟಾಂಗಕ್ಕೆ ಸಿದ್ಧವಾಗುತ್ತಿದ್ದರು.ಬಿರು ಬಿಸಿಲಲ್ಲಿ ಬೆವರೊರಸಿಕೊಳ್ಳುತ್ತಾ ಮನೆಯೊಳಕ್ಕೆ ಬಂದ ಕುಟ್ಟ ಬ್ಯಾರಿಗೆ ಕಾರಣವಿಲ್ಲದೆ ಸುಮ್ಮನೆ ಒಂದೆರಡು ಬೈಯುವ ಅಮ್ಮ ಕೊನೆಗೆ ಎರಡು ಬೆಲ್ಲದ ತುಂಡುಗಳ ಜೊತೆ ತಂಬಿಗೆ ನೀರು ತಂದು ಕೊಡುತ್ತಿದ್ದಳು.
ಅಪ್ಪನ ಜೊತೆ ಪಟ್ಟಾಂಗ ಆರಂಭಿಸುವ ಮುನ್ನ ಕುಟ್ಟ ಬ್ಯಾರಿಗೆ ಒಂದು ಬೀಡಿ ಏರಿಸಲೇಬೇಕು.ಅಪ್ಪ ಸಾಮಾನ್ಯವಾಗಿ ಬೀಡಿ ಸೇದುವ ಚಟದವರಲ್ಲ.ಆದರೂ ಕುಟ್ಟ ಬ್ಯಾರಿಯ ಬೀಡಿ ಸೇದುವ ಶ್ಯಲಿಗೆ ಮರುಳಾಗಿದ್ದ ಅವರು ‘ನನಗೂ ಒಂದು ಬೀಡಿ ಕೊಡು’ ಎಂದು ಹೇಳಿದಾಗ ಕುಟ್ಟ ಬ್ಯಾರಿ ಅದೆಲ್ಲಿಂದಲೋ ಒಂದು ಸಾಧು ಬೀಡಿ ತೆಗೆದು ಅಪ್ಪನ ಕೈಗಿಡುತ್ತಿದ್ದ.ಆದರೆ ಯಾವ ಕಾರಣಕ್ಕೂ ಬೆಂಕಿ ಕಡ್ಡಿ ಮಾತ್ರ ಕೊಡುತ್ತಿರಲಿಲ್ಲ,‘ಒಲೆಯಿಂದ ಉರಿಸಿಕೊಳ್ಳಿ’ಅಂತ ಹೇಳಿದಾಗ ಬೀಡಿ ನನ್ನ ಕೈಗೆ ಬರುತ್ತಿತ್ತು.ನಾನು ಛಂಗನೆ ಜಿಗಿದು,ಅಡಿಗೆ ಮನೆ ಸೇರಿ, ಬೀಡಿ ಉರಿಸಿ, ಒಂದು ದಮ್ಮು ಸೇದಿ, ಮರುಕ್ಷಣದಲ್ಲಿ ಬೀಡಿಯನ್ನು ಅಪ್ಪನ ಕೈಯಲ್ಲಿಡುತ್ತಿದ್ದೆ.
ಅಷ್ಟರಲ್ಲಿ ಅವರಿಬ್ಬರ ನಡುವೆ ಪಟ್ಟಾಂಗ ಆರಂಭವಾಗುತ್ತಿತ್ತು. ಅದೊಂದು ರಮ್ಯಾದ್ಭುತ ಲೋಕ.
ಆ ಕಾಲದಲ್ಲಿಯೇ ಕುಟ್ಟ ಬ್ಯಾರಿ ಪುತ್ತೂರು,ಬಂಟ್ವಾಳ,ಮಂಗಳೂರು ವರೆಗೆ ಹೋಗಿಬರುತ್ತಿದ್ದನಾದ್ದರಿಂದ ಅವನ ಅನುಭವ ಲೋಕ ಅಪಾರವಾಗಿತ್ತು. ಅವನು ಭೇಟಿ ಮಾಡುತ್ತಿದ್ದ ಬಗೆಬಗೆಯ ಜನಗಳು, ಮಂಗಳೂರು ಬಂದರಿನಲ್ಲಿ ಅವನು ಬಾಳೆಕಾಯಿ ಮಾರಲು ಪಟ್ಟ ಶ್ರಮ, ಹಿಂದೆ ಬರುವಾಗ ಪಾಣೆಮಗಳೂರು ಸೇತುವೆ ಬಳಿ ಉಂಟಾದ ಸಣ್ಣ ಅಫಘಾತ, ಇತ್ಯಾದಿಗಳನ್ನು ಆತ ಸೊಗಸಾಗಿ ವರ್ಣನೆ ಮಾಡುತ್ತಿದ್ದ. ಜೊತೆಗೆ, ಅಡಿಕೆ ಧಾರಣೆಯಲ್ಲಿ ಇಳಿತ, ಕಾಳುಮೆಣಸಿಗೆ ಬಂದ ರೋಗ, ಇತ್ಯಾದಿಗಳ ಬಗೆಗೂ ಆತ ವಿವರ ನೀಡುತ್ತಿದ್ದ.ಅವನ ಬಂಧುಗಳ್ಯಾರೋ ಕೇರಳದಲ್ಲಿ ಸತ್ತುಹೋದದ್ದು,ಹುಡುಗನೊಬ್ಬ ಬೊಂಬಾಯಿಗೆ ಓಡಿ ಹೋದದ್ದು ಕೂಡಾ ಅವನ ವಿವರಣೆಯಲ್ಲಿ ಕೇಳಿಬರುತ್ತಿತ್ತು.ಕುಟ್ಟ ಬ್ಯಾರಿಯ ವಿಶಾಲವಾದ ಅನುಭವ ಲೋಕಕ್ಕೆ ತೆರೆದುಕೊಳ್ಳುತ್ತಿದ್ದಂತೆ ಆತನ ಬಗ್ಗೆ ನನಗೆ ಅತೀವ ಗೌರವ ಉಂಟಾಗುತ್ತಿತ್ತು. ರೇಡಿಯೋ, ವರ್ತಮಾನ ಪತ್ರಿಕೆಗಳಿಲ್ಲದ ಬಂಟಮಲೆಗೆ ಕುಟ್ಟ ಬ್ಯಾರಿ ಎಲ್ಲವೂ ಆಗಿದ್ದ.
ಗಂಟೆಗಟ್ಲೆ ಮಾತಾಡಿದ ಆನಂತರ ಕುಟ್ಟ ಬ್ಯಾರಿ ವಿಷಯಕ್ಕೆ ಬರುತ್ತಿದ್ದ. ಏನಾದರೂ ಇದ್ರೆ ಕೊಡಿ ಅಂತ ದುಂಬಾಲು ಬೀಳುತ್ತಿದ್ದ. ಕೊನೆಗೆ ಅಪ್ಪ ಸ್ವಲ್ಪ ಅಡಿಕೆ,ಗೇರು ಬೀಜ ಮತ್ತು ಬಾಳೆಗೊನೆ ಕೊಟ್ಟರೆ ಅದಕ್ಕೆ ಒಂದಷ್ಟು ದುಡ್ಡು ಕೊಟ್ಟು ಮುಂದೆ ಸಾಗುತ್ತಿದ್ದ. ಅಪ್ಪನಲ್ಲಿ ಕೊಡಲು ಏನೂ ಇಲ್ಲದಿದ್ದರೂ ಆತನಿಗೇನೂ ಬೇಸರವಿರಲಿಲ್ಲ.ಅಪ್ಪ ಕೇಳಿದರೆ ಒಂದೈದು ರೂಪಾಯಿ ಅವರ ಕೈಗಿತ್ತು, ‘ಇರಲಿ ಯಜಮಾನ್ರೇ, ಮುಂದೆ ನೋಡೋಣ’ ಅಂತ ಹೇಳಿ ಅಪ್ಪನನ್ನೇ ಸಮಾಧಾನ ಪಡಿಸುತ್ತಿದ್ದ.
ಕುಟ್ಟ ಬ್ಯಾರಿಯ ತಲೆಯ ಮೇಲಿರುತ್ತಿದ್ದ ಗೋಣಿ ಚೀಲ ಒಂದು ಪುಟ್ಟ ವಿಶ್ವಕೋಶ.ಒಣ ಮೀನುಗಳು,ಮೆಣಸಿನ ಕಾಯಿ,ಅಕ್ಕಿ, ಓಲೆಬೆಲ್ಲ,ನೀರುಳ್ಳಿ,ಹೀಗೆ ಇನ್ನೇನೋ. ಆತ ಊರು ಸುತ್ತುವಾಗ,ಯಾರ್ಯಾರಿಗೋ ಏನೇನೋ ತಂದುಕೊಡುತ್ತೇನೆ ಅಂದದನ್ನು ನೆನಪಿಟ್ಟುಕೊಂಡು ಕೊಟ್ಟು ಹೋಗುತ್ತಿದ್ದ. ಒಮ್ಮೆ ಕೇರಳದಿಂದ ತಂದ ಓಲೆಬೆಲ್ಲದ ಕಟ್ಟನ್ನು ಉಚಿತವಾಗಿ ಅಪ್ಪನ ಕೈಗಿಟ್ಟು ‘ ನಿಮ್ಮದು ಯಕ್ಷಗಾನ ಮಾಡಿ ಬಂದಾಗ ಈ ಬೆಲ್ಲ ಹಾಕಿ ಚಾಯ ಕುಡಿರಿ, ಪಿತ್ತ ಎಲ್ಲ ಇಳಿಯುತ್ತದೆ’ ಅಂದಿದ್ದ. ಆ ದಿನ ಅಮ್ಮನ ಕೈಯಿಂದ ಒಂದು ತುಂಡು ಬೆಲ್ಲ ಉಚಿತವಾಗಿ ತಿನ್ನಲು ಸಿಕ್ಕಾಗ ಕುಟ್ಟ ಬ್ಯಾರಿಯ ಬಗೆಗೆ ಅಪಾರವಾದ ಪ್ರೀತಿ ಉಂಟಾಯಿತು.
ಅಪ್ಪನ ಜೊತೆಗೆ ಕುಳಿತು,ಆತನ ಪಟ್ಟಾಂಗಕ್ಕೆ ಕಿವಿಗೊಡುವ ನನ್ನ ಬಗೆಗೆ ಕುಟ್ಟ ಬ್ಯಾರಿಗೆ ವಿಶೇಷ ಪ್ರೀತಿ.ಒಮ್ಮೊಮ್ಮೆ ನಾನು ಪಂಜದಲ್ಲಿ ಯಕ್ಷಗಾನ ನೋಡಲು ಹೋಗುತ್ತಿದ್ದಾಗ ಆತ ಆಟ ಸುರುವಾಗುವ ಮುನ್ನ ಟೆಂಟ್ ಬಳಿ ಪ್ರತ್ಯಕ್ಷನಾಗುತ್ತಿದ್ದ.‘ಬನ್ನಿ ಯಜಮಾನ್ರೇ’ಅಂತ ಹೇಳಿ ಅಲ್ಲೆಲ್ಲೋ ಕರೆದುಕೊಂಡು ಹೋಗಿ,ಚಹಾ ಕುಡಿಸಿ,ಮತ್ತೆಲ್ಲೋ ಕಾಣೆಯಾಗಿಬಿಡುತ್ತಿದ್ದ.ಕುಟ್ಟ ಬ್ಯಾರಿಯ ಚಹಾದಿಂದಾಗಿ ಕಿಸೆಯಲ್ಲಿಯೇ ಉಳಿದ ನಾಲ್ಕಾಣೆಯಿಂದ ಇನ್ನೊಂದು ಯಕ್ಷಗಾನ ನೋಡಲು ಸಾಧ್ಯವಾಗುತ್ತಿತ್ತು,ಮತ್ತು ಅದಕ್ಕಾಗಿ ಅಪ್ಪನನ್ನು ಗೋಗರೆಯುವುದು ತಪ್ಪುತ್ತಿತ್ತು.
ಕಾಲಾನಂತರ ನಾನು ಕಾಲೇಜು ಸೇರಿದ್ದೆ. ರಜೆಯಲ್ಲಿ ಊರಿಗೆ ಹೋಗಿದ್ದಾಗ ಒಮ್ಮೆ ಕುಟ್ಟ ಬ್ಯಾರಿ ಸಿಕ್ಕಿದ್ದರು.ಮುಖ ಬಾಡಿತ್ತು, ಸುಸ್ತಾದವರಂತೆ ಕಾಣುತ್ತಿದ್ದರು. ನನ್ನನ್ನು ನೋಡಿ ‘ ಒಂದು ಉಪಕಾರ ಆಗಬೇಕಲ್ಲ ಯಜಮಾನರೇ” ಅಂದರು. ‘ಏನು ಹೇಳಿ? ಅಂದೆ.‘ಸರಕಾರ ಬಡವರಿಗೆ ಐದು ಸೆಂಟ್ಸ್ ಜಾಗ ಕೊಡುತ್ತದೆ ಅಂತಲ್ಲ?ನನಗೆ ಒಂದು ಅರ್ಜಿ ಬರೆದುಕೊಡಿ,ಹಾಗೆ ಯಾರಿಗಾದರೂ ಹೇಳಿ ಜಾಗ ಕೊಡಿಸಿ, ನನಗೆ ಇದೇ ಊರಲ್ಲಿ ಸಾಯಬೇಕು ಅಂತ ಆಸೆ’ ಅಂದರು. ನಾನು ಅರ್ಜಿಯೇನೋ ಬರೆದುಕೊಟ್ಟೆ,ಆದರೆ ಕಾರಣಾಂತರಗಳಿಂದ ಅವರಿಗೆ ಐದು ಸೆಂಟ್ಸ್ ಜಾಗ ದೊರೆಯಲೇ ಇಲ್ಲ.ನಾನು ಕೊನೆಯ ಬಾರಿ ಅವರನ್ನು ಕಂಡಾಗ ಐದು ಸೆಂಟ್ಸ್ ಜಾಗಕ್ಕಾಗಿ ಅವರು ಕಣ್ಣೀರಿಡುತ್ತಿದ್ದರು.
ಈಗ ಹಿಂದೂ ಕೋಮುವಾದಿಗಳು ಅನ್ಯ ಮತ ದ್ವೇಷ ಬಿತ್ತುತ್ತಿರುವಾಗ,ಈ ಪುಣ್ಯ ಭೂಮಿ ಭರತ ಖಂಡದಲ್ಲಿ ಐದು ಸೆಂಟ್ಸ್ ಜಾಗದ ಕನಸು ಕಾಣುತ್ತಾ, ಕೊನೆಗೆ ಕನಸುಗಳಿಲ್ಲದ ಹಾದಿಯಲ್ಲಿ ಕುಸಿದು ಹೋದ ಕುಟ್ಟ ಬ್ಯಾರಿ ತೀವ್ರವಾಗಿ ನೆನಪಾಗುತ್ತಾರೆ.

ಡಾ.ಪುರುಷೋತ್ತಮ ಬಿಳಿಮಲೆ
ಸುಳ್ಯ ನೆಹರೂ ಸ್ಮಾರಕ ಕಾಲೇಜಿನಲ್ಲಿ ತನ್ನ ವೃತ್ತಿ ಬದುಕನ್ನು ಕಂಡುಕೊಂಡ ಪುರುಷೋತ್ತಮ ಬಿಳಿಮಲೆಯವರು ನಂತರ ಮಂಗಳೂರು ವಿವಿಯಲ್ಲಿ ಉಪನ್ಯಾಸಕರಾಗಿ,ಹಂಪಿ ವಿವಿಯಲ್ಲಿ ಪ್ರಾಧ್ಯಾಪಕರಾಗಿ ನಂತರ ನವದೆಹಲಿಯ ಅಮೇರಿಕನ್ ಇನ್ಸ್ಸ್ಟಿಟ್ಯೂಟ್ ಆಪ್ ಸ್ಟಡೀಸ್ನಲ್ಲಿ ಸಹನಿರ್ದೇಶಕರಾಗಿ,ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಇದೀಗ ಅದರ ನಿರ್ದೇಶಕರಾಗಿದ್ದಾರೆ.




























Great our “kutta beary” , Dr.Purushotham explained old days very nice. tx 2 Gulfkannadiga Team.
ನಿಮ್ಮ ಲೇಖನ ಓದಿ ಮನಸ್ಸಿಗೆ ಕೆಡುಕೆನಿಸಿತು. ಈ ರೀತಿಯ ಘಟನೆಗಳು ಇನ್ನು ನೆನಪಷ್ಟೇ.. , ಹಳೆ ದಿನಗಳು ಎಷ್ಟು ಸುಂದರ ಅಲ್ಲವೇ ?
ಹೆಣ್ಣು,ಹೊನ್ನು ಮತ್ತು ಮಣ್ಣಿಗಾಗಿ ಮಾನವೀಯತೆಯನ್ನು ಕೇವಲ ಕೋಮು ಭಾವನೆಯೊಂದೇ ನಾಶ ಪಡಿಸುತ್ತಿಲ್ಲ ಬದಲಿಗೆ ದಾಯಾದಿ ದ್ವೇಷ, ಅಸೂಯೆ ಹಾಗೂ ಅಹಂಕಾರಗಳು ಸಹಾ ನಾಶ ಪಡಿಸಲು ಸಾದ್ಯವಿದೆ ಎಂಬುದನ್ನು ಸಣ್ಣ ಮನಸ್ಸಿನ ಕುಹಕಿಗಳು ಯಾವಾಗ ಅರ್ಥ ಮಾಡಿಕೊಳ್ಳುತ್ತಾರೋ ಅಂದೇ ಕಲಿಯುಗವು ನಾಶಗೊಂಡಿದೆ ಎಂದು ತಿಳಿದುಕೊಳ್ಳಲು ಕುಟ್ಟ ಬ್ಯಾರಿಯ ಪುಟ್ಟ ಕಥೆ ತಾಜಾ ಉದಾಹರಣೆಯಾಗಿದೆ.
ಏನೋ ಇದೊಂದು ನೈಜ ಲೇಖನ ಓದುವಾಗ ಮನೆಯ ಪರಿಸರ, ಆ ವ್ಯಕ್ತಿ ಪಾತ್ರಗಳು , ಆ ಕಾಡು, ಅಂಗಳ ಮತ್ತು ಚರ್ಚಿಸುವ ಮಾತುಗಳು ದೃಶ್ಯ ರೂಪದಲ್ಲಿ ಕಣ್ಣ ಮುಂದೆ ಹಾದು ಹೋದಂತಾಯ್ತು. ಮನ ಮುಟ್ಟುವಂತೆ ಬರೆದ ಡಾ.ಪುರುಷೋತ್ತಮ ಬಿಳಿಮಲೆ ಯವರಿಗೂ ಹಾಗು ಪ್ರಕಟಿಸಿದ ಗಲ್ಫ್ ಕನ್ನಡಿಗಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು…
Subhashini, Kasaragod
ನಮ್ಮ ಗ್ರಾಮೀಣ ವಾತಾವರಣ ಈಗಲೂ ಹಿಂದಿನಂತೆಯೇ ಇದೆ . ಈ ಲೇಖನ ಓದುತ್ತಿರುವ ಹೊತ್ತಿಗೆ ನೆರೆಮನೆಯ ಖಾದರ್ ಪಟ್ಟಾಂಗ ಹೊಡೆಯುತ್ತಾ ಇದ್ದ . ಇವರು ಅವನ ಟೀವಿ ಎಲ್ಲಿ ಕೆಟ್ಟು ಹೋಗಿದೆ ಎಂದು ತಪಾಸಣೆ ಮಾಡುತ್ತಾ …… ಇರಬೇಕಾದರೆ..” ಕಾಲ ಅಷ್ಟೇನೂ ಕೆಟ್ಟಿಲ್ಲ ..” ಅನ್ನಿಸಿ ಬಿಡ್ತು .
“ಕುಟ್ಟಿ ಬ್ಯಾರಿ”ಯಂತಹವರು ಈ ದೇಶದಲ್ಲಿ ಕೋಟಿಗಟ್ಟಲೇ ಜನರಿದ್ದಾರೆ. ಜೀವಿತಾವಧಿಯಲ್ಲಿ ಜೀವನಕ್ಕಾಗಿ ಹೋರಾಡಿಕೊಂಡು, ತನ್ನ ನೆಲದಲ್ಲಿಯೇ ಜೀವ ಬಿಡುವ ಮಹಾದಾಸೆಯಿಂದ “5 ಸೆಂಟ್ ಜಾಗಕ್ಕಾಗಿ” ಅರ್ಜಿ ಸಲ್ಲಿಸಿ, ತನ್ನ ಕೊನೆ ಆಸೆ ಪೂರೈಸಿಕೊಳ್ಳಲಾಗದೇ ಜೀವ ತೆತ್ತ ಆತ್ಮಕ್ಕೆ ಶಾಂತಿ ಸಿಗಲಿ.
ಕುಟ್ಟ ಬ್ಯಾರಿ ಯ ವಾಸ್ತವ ಕತೆ ಓದಿದಾಗ ಮನ ತುಂಬಿತು.ಆದರೆ ಡಾಕ್ಟರ ಪುರುಶೋತ್ತಮರ ಕೊನೆಯ ಪ್ರಶ್ನೆಯಂತೆ ಇಂದಿನ ದಿನಗಳಲ್ಲಿ ಕುಟ್ಟ ಬ್ಯಾರಿಯಂತಹವರಿಗೆ ನ್ಯಾಯ ಸಿಕ್ಕಿತೆ ???
Doctor ಅವರೇ ತಾವು ಕುಟ್ಟ ಬ್ಯಾರಿ ಅವರ ಬಗ್ಗೆ ತುಂಬಾ ಸುಂದರವಾಗಿ ವರ್ಣಿಸಿದ್ದಿರಿ ಓದುತ್ತ ಹೋದಂತೆಲ್ಲ ನಮಗೆ ಯಾರೋ ಹತ್ತಿರದವರ ಬಗ್ಗೆ ಓದುತ್ತಿದ್ದೆವೇನೋ ಎಂಬಂತೆ ಭಾಸವಾಗುತ್ತದೆ. ಇಂಥವರೆಲ್ಲ ಯಾಕೆ ಬೇಗ ಕನ್ಮರೆಯದರೋ ಅಥವಾ ನಾವೇ ಯಾಕೆ ತುಂಬಾ ತಡವಾಗಿ ಈ ಭೂಮಿಗೆ ಬಂದೆವೋ ಎಂದು ಬೇಸರವಾಗುತ್ತದೆ. ಲೇಖನಕ್ಕಾಗಿ ತುಂಬಾ ಧನ್ಯವಾದಗಳು.
ಕುಟ್ಟ ಬ್ಯಾರಿಗೆ ಕಾಲೂರಲು ಸ್ವಲ್ಪವೂ ಜಾಗ ಸಿಗದೇ ಹೋಯಿತಲ್ಲ ….ನಮ್ಮ ಕಣ್ಣ ಮುಂದೆ ಬ್ಯಾರಿ ನಿಲ್ಲುವಂತೆ ಮಾಡಿದ ಲೇಖಕರಿಗೆ ಅಭಿನಂದನೆಗಳು …
ಕುಟ್ಟ ಬ್ಯಾರಿಯ ನೈಜ ಚಿತ್ರಣ ಅದ್ಭುತವಾಗಿದೆ. ಚಿಕ್ಕ ಮತ್ತು ಚೊಕ್ಕವಾದ ಈ ಲೇಖನ ಅಂದಿನ ಮತೀಯ ಸಾಮರಸ್ಯವನ್ನು ಎತ್ತಿ ಹಿಡಿದಿದೆ. ಕುಟ್ಟು ಬ್ಯಾರಿಯನ್ನು ಗಲ್ಫ್ ಕನ್ನಡಿಗ ಓದುಗರಿಗೆ ಪರಿಚಯ ಮಾಡಿಕೊಟ್ಟ ಪುರುಷೋತ್ತಮ ಸಾರ್ ಅವರಿಗೆ ವಂದನೆಗಳು.
tumba dhanyavadagalu Dr. balyada nenapugalu onde samane kanmunde bandavu, namma naadu eega yake heegilla yendu besaravaithu.
ಹೊಸ ಮುಖ ಹೊತ್ತ ‘ಗಕ’ ಸುಂದರವಾಗಿ ಕಾಣುತ್ತಿದ್ದಾಳೆ..!
Dr.Purushottam sir Hats off….Real doctor….u r the real doctor ….awesome…..
ಬಾಲ್ಯದ ಅದೆಸ್ತೋ ನೆನಪುಗಳಲ್ಲಿ ಹಾದು ಹೋಗುವ ಕುತ್ತ ಬ್ಯಾರಿಯಂಥಹ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವಾಗ ನಾವೆಲ್ಲೋ ಎಡವಿ ಬಿದ್ದಿದೇವೆ ಅನಿಸುತ್ತಿದೆ ಕವಿಗಳು ಹೇಳಿದಂತೆ ಬಾಲ್ಯ ಜೀವನವೇ ಮರಳಿ ಬಂದರೆ ಅದೆಸ್ತು ಸುಂದರವಾಗುತ್ತಿತ್ತು ಬಾಲ್ಯದ ಗೆಳೆಯರು ಬಾಲ್ಯದ ಘಟನೆಗಳು ನೆನಪಿಸುವಾಗ ಮನಸ್ಸುಗಳು ಸಂನವಾಗಿಬಿದುತ್ತದೆ
ಒಳ್ಳೆಯ ಲೇಖನ,ಧನ್ಯವಾದಗಳು,
ಡಾ.ಪುರುಷೋತ್ತಮ ಬಿಳಿಮಲೆ.. Sr: ಕಾಡಿನ ಮಧ್ಯೆ ಹಾದು ಹೋಗುವ ದಾರಿ ಆ ಮನೆಯ ಅಂಗಳ ತುಳಸಿ ಕಟ್ಟೆ ಒಬ್ಬಾಕೆ ಮನೆಯೊಡತಿ ಕಾಟನ್ ಸಾರಿ ಉಟ್ಟು ಅಂಗಳ ಗುಡಿಸುತ್ತಿದ್ದಾಳೆ ಒಬ್ಬ ಹುಡುಗ ಚಡ್ಡಿ ಮಾತ್ರ ಹಾಕಿ ಒಂದು ಬದಿಯಲ್ಲಿ ಕೂತು ಇಬ್ಬರ ಪಟ್ಟಾಂಗವನ್ನು ತುಂಬಾ ಉತ್ಸುಕನಾಗಿ ನೋಡುತ್ತಿದ್ದಾನೆ. ಏನೋ ಅಂತರಾಳದ ಕದ ತಟ್ಟಿತು ಮತ್ತಷ್ಟು ಓದಬೇಕನ್ನಿಸಿತು ಅಷ್ಟರಲ್ಲಿ ಮುಗಿದು ಹೋಯಿತು.ನಾವು ಸ್ವಲ್ಪ ಹಿಂದೆ ಸರಿದರೆ ಪ್ರತಿಸ್ಹಿತ ಕುಟುಂಬಗಳಲ್ಲಿ ಸದಾ ಒಂದು ಬ್ಯಾರಿ ಪಾತ್ರ ಇದ್ದೆ ಇತ್ತಲ್ಲವ? ಈಗೇಕೋ ಅದು ಮಾಯವಾಗುತ್ತಿದೆ. ಅದು ಕೇವಲ ಒಂದು ಪಾತ್ರ ಮಾತ್ರವಾಗಿರಲಿಲ್ಲ ಕುಟುಂಬದ ಒಬ್ಬ ಸದಸ್ಯನಾಗಿ ಮೋಡಿಬರುತ್ತಿತ್ತು. ಅಂದಹಾಗೆ ನನ್ನ ತಮ್ಮನಿಗೆ ನಿಶ್ಚಿತಾರ್ತದ ಸಂದರ್ಭದಲ್ಲಿ ಹುಡುಗಿಯ ಕಡೆಯಿಂದ ಒಬ್ಬರು ಸೆಟ್ರು ಬಂದಿದ್ದರು ಅವರ ಎಲ್ಲ ಹೆಳ್ಮಕ್ಕಳೀಗೂ ವರನನ್ನು ನೋಡುವುದೇ ಅವರಂತೆ ಇಷ್ಟು ಸುಂದರವಾದ ಸಂಸ್ಕೃತಿಯನ್ನು ನಾಶ ಮಾಡಿದವರಿಗೆ ಈ ಪ್ರಕೃತಿ ಕ್ಷಮೆ ನೀಡಿತೇ? ಡಾ.ಪುರುಷೋತ್ತಮ ಬಿಳಿಮಲೆ ಯವರಿಗೂ ಹಾಗು ಪ್ರಕಟಿಸಿದ ಗಲ್ಫ್ ಕನ್ನಡಿಗಕ್ಕೆಧನ್ಯವಾದಗಳು .
ತುಂಬ ಚೆನ್ನಾಗಿತ್ತು ಸರ್ ನೀವು ಬರೆದ ನೈಜ ಕಥೆ…..ಇತ್ತೀಚೆಗೆ ಯಾಕೋ ಇಂಥ ವಾತಾವರಣ ನಮ್ಮ ನಡುವಿಂದ ಕಣ್ಮರೆಯಾಗುತ್ತಿದೆ….ಯಾವುದೋ ಊರಲ್ಲಿ ಹೇಗೋ ಬದುಕುತ್ತಿರುವವರಿಗೊಸ್ಕರ ಅವರ ರಾಜಕೀಯ ಲಾಭಕ್ಕೋಸ್ಕರ ನಾವು ಬಲಿಯಾಗಬಾರದು…..
ನನ್ನ ಲೇಖನ ಓದಿದ, ಪ್ರತಿಕ್ರಿಯಿಸಿದ ಆತ್ಮೀಯರಿಗೆ ವಂದನೆಗಳು. ಪ್ರಕಟಿಸಿದ ಗೆಳೆಯ ರಾಮಚಂದ್ರರ ಸಾಹಸ ದೊಡ್ಡದು. ತಲೆಬಾಗಿ ನಮಿಸುವೆ